ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ನಲ್ಲಿ ತೋಟಗಾರಿಕೆ ಇಲಾಖೆ ಮೂರು ದಿನ ಆಯೋಜಿಸಿರುವ ಮಾವು ಮತ್ತು ಜೇನು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ಸಿಕ್ಕಿತು.
ಶಾಸಕ ಆಸಿಫ್ ಸೇಠ್ ಉದ್ಘಾಟಿಸಿ ಮಾತನಾಡಿ, ‘ರೈತರು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಲು ಇಂಥ ಮೇಳಗಳಿಂದ ಅನುಕೂಲವಾಗುತ್ತಿದೆ. ಜತೆಗೆ, ಹೆಚ್ಚಿನ ಲಾಭವೂ ಕೈಸೇರುತ್ತಿದೆ. ಇಂಥ ಮೇಳ ಹೆಚ್ಚೆಚ್ಚು ನಡೆಯಬೇಕು’ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ‘ಈಗ ಮಾವು ಮಾರಾಟದ ಸೀಸನ್ ಆರಂಭವಾಗಿದೆ. ಆದರೆ, ಮತ್ತೊಂದೆಡೆ ಮಳೆ ಸುರಿಯುತ್ತಿರುವ ಕಾರಣ ಬೆಳೆ ಹಾನಿಗೀಡಾಗಿ ರೈತರಿಗೆ ನಷ್ಟವಾಗದಿರಲೆಂದು ಈ ವರ್ಷ ಬೇಗನೇ ಮೇಳ ಆಯೋಜಿಸಿದ್ದೇವೆ. ಇದರಲ್ಲಿ 22 ಮಳಿಗೆಗಳಿವೆ. ಈ ಪೈಕಿ 18ರಲ್ಲಿ ಕರ್ನಾಟಕದವರು ಮತ್ತು ನಾಲ್ಕರಲ್ಲಿ ಮಹಾರಾಷ್ಟ್ರದವರು ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಗಳ ಮಾವು ಮಾರುತ್ತಿದ್ದಾರೆ’ ಎಂದರು.
‘ಖಾನಾಪುರ ಮತ್ತು ಜಾಂಬೋಟಿ ಪರಿಸರವು ಜೇನು ಕೃಷಿಗೆ ಖ್ಯಾತಿ ಗಳಿಸಿದೆ. ನಾವು ಜೇನು ಕೃಷಿ ಮಾಡುವವರ ಗುಂಪು ರಚಿಸಿ, ಸರ್ಕಾರದ ವತಿಯಿಂದ ವಿವಿಧ ಸೌಕರ್ಯ ಕಲ್ಪಿಸಿದ್ದೇವೆ. ಜೇನು ಕೃಷಿಕರೂ ಇಲ್ಲಿ ತಮ್ಮ ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಜೇನು ಬಳಸಿಯೇ 20ರಿಂದ 25 ಮಾದರಿಗಳ ಉತ್ಪನ್ನಗಳನ್ನು ಸಿದ್ಧಪಡಿಸಿದವರೂ ಪಾಲ್ಗೊಂಡಿದ್ದಾರೆ’ ಎಂದು ಹೇಳಿದರು.
ಇದೇ ವೇಳೆ, ಬೆಳಗಾವಿ ಮ್ಯಾಂಗೋ ಬ್ರ್ಯಾಂಡ್ ಮತ್ತು ಝೇಂಕಾರ ಜೇನುತುಪ್ಪದ ಬಾಟಲಿಯನ್ನು ಬಿಡುಗಡೆಗೊಳಿಸಲಾಯಿತು.
ಖರೀದಿ ಜೋರು: ಬೆಳಗಾವಿ ಮಾತ್ರವಲ್ಲದೆ; ವಿವಿಧೆಡೆಯಿಂದ ಬಂದಿದ್ದ ಗ್ರಾಹಕರು ಪ್ರದರ್ಶನದಲ್ಲಿ ಉತ್ಸಾಹದಿಂದ ಸುತ್ತಾಡಿದರು.
ಆಪೂಸ್, ಅಲ್ಫಾನ್ಸೋ, ಬಾದಾಮ್, ವನರಾಜ, ನಾಜುಕ್ ಪಸಂದ್, ಗೋವಾ, ಟಾಮಿ ಅಲ್ಕನ್, ಸಿಂಧು, ಛೋಟಾ ಝಾಂಗಿರ್ ಮತ್ತಿತರ ತಳಿಗಳ ಮಾವಿನ ಹಣ್ಣು ಖರೀದಿಸಿದರು. ಆಪೂಸ್ ಮಾವಿಗೆ ಬೇಡಿಕೆ ಹೆಚ್ಚಿತ್ತು. ಕೆಲವರು ಜೇನು ಖರೀದಿಸಿ, ಅದರ ಸವಿ ಸವಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.