ADVERTISEMENT

ರೈಲು ನಿಲ್ದಾಣಕ್ಕೆ ಲಿಂ.ಶಿವಬಸವ ಸ್ವಾಮೀಜಿ ಹೆಸರು ನಾಮಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 9:01 IST
Last Updated 25 ಸೆಪ್ಟೆಂಬರ್ 2021, 9:01 IST

ಬೆಳಗಾವಿ: ‘ಗಡಿನಾಡಿನಲ್ಲಿ ಕನ್ನಡದ ಶಕ್ತಿ ಕೇಂದ್ರ ಎನಿಸಿರುವ ನಾಗನೂರು ರುದ್ರಾಕ್ಷಿ ಮಠದ ಲಿಂ.ಶಿವಬಸವ ಸ್ವಾಮೀಜಿ ಅವರ ಹೆಸರನ್ನು ನಗರದ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಗಳೂರಿನಲ್ಲಿ ಶನಿವಾರ ಮನವಿ ಸಲ್ಲಿಸಿತು.

‘ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು. ಖ್ಯಾತ ರಂಗಭೂಮಿ ಕಲಾವಿದ ದಿ.ಏಣಗಿ ಬಾಳಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು. ಬೆಳಗಾವಿಯು ಕರ್ನಾಟಕದಲ್ಲಿಯೇ ಉಳಿಯಲು ಅವಿರತವಾಗಿ ಶ್ರಮಿಸಿದ ಅಕ್ಷರ ಹಾಗೂ ಅನ್ನ ದಾಸೋಹಿ ಶಿವಬಸವ ಮಹಾಸ್ವಾಮೀಜಿ ಅವರ ಹೆಸರು ಅಜರಾಮರವಾಗಿ ಉಳಿಯಲು ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.

‘ಬೆಳಗಾವಿಗೆ ಮಂಜೂರಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಬೇಕು. ಆಡಳಿತ ಸುಧಾರಣೆ ಆಯೋಗವು ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ರದ್ದುಗೊಳಿಸಬೇಕೆಂದು ಮಾಡಿರುವ ಶಿಫಾರಸನ್ನು ಸರ್ಕಾರ ಒಪ್ಪಬಾರದು. ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರಕ್ಕೆ ಬೇಗ ಕ್ರಮ ವಹಿಸಬೇಕು’ ಎಂದು ಕೋರಿದರು.

ADVERTISEMENT

ನಿಯೋಗದಲ್ಲಿ ಶಿವಪ್ಪ ಶಮರಂತ, ಶಂಕರ ಬಾಗೇವಾಡಿ, ವೀರೇಂದ್ರ ಗೋಬರಿ, ಬೆಂಗಳೂರಿನ ಕನ್ನಡ ಹೋರಾಟಗಾರ ಪಾಲನೇತ್ರ, ಶಿವಾನಂದ ಮೇಟ್ಯಾಲ, ಶಂಕರ ಗುಡಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.