ಬೆಳಗಾವಿ: ‘ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಾಳಾಗಿರುವ ರಸ್ತೆಗಳು, ಚರಂಡಿ ಹಾಗೂ ಒಳಚರಂಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಅಕ್ಟೋಬರ್ನಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು’ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
‘ಅಕ್ಟೋಬರ್ ಕೊನೆಯಲ್ಲಿ 26 ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಉಳಿದ 310 ಕಾಮಗಾರಿಗಳಿದ್ದು ಡಿಸೆಂಬರ್ನಲ್ಲಿ ಶುರು ಮಾಡಲಾಗುವುದು. ರಸ್ತೆ, ಚರಂಡಿ ಮತ್ತು ಒಳಚರಂಡಿ ಜೊತೆಗೆ ಉದ್ಯಾನ, ಕನ್ನಡ ಮತ್ತು ಮರಾಠಿ ಸರ್ಕಾರಿ ಶಾಲೆಗಳು, ಭವನಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ನವೆಂಬರ್ನಲ್ಲಿ ಮಹಿಳಾ ಬಜಾರ್ ನಿರ್ಮಾಣ, ಕೆಲವು ಕಡೆಗಳಲ್ಲಿ ಸಣ್ಣ ಸಣ್ಣ ತರಕಾರಿ ಮಾರುಕಟ್ಟೆಗಳನ್ನು ಹಂತ–ಹಂತವಾಗಿ ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
‘ಮುಂದಿನ 6 ತಿಂಗಳಲ್ಲಿ ಕ್ಷೇತ್ರದಲ್ಲಿ ಶೇ 90ರಷ್ಟು ಕಾಮಗಾರಿಗಳನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಧಾಮಣೆ, ಯಳ್ಳೂರ, ಪೀರನವಾಡಿ ಮತ್ತು ಮಚ್ಚೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.