
ಪ್ರಜಾವಾಣಿ ವಾರ್ತೆ
ಸುವರ್ಣ ವಿಧಾನಸೌಧ, ಬೆಳಗಾವಿ: ‘ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ವೃಕ್ಷ ಸಂವರ್ಧನೆ ಮತ್ತು ವೃಕ್ಷ ಸಂರಕ್ಷಣೆ ಅರಣ್ಯ ಇಲಾಖೆಯ ಆದ್ಯತೆಯಾಗಬೇಕು’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸುವರ್ಣ ಸೌಧದ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಳಗಾವಿ ವೃತ್ತದ ಅರಣ್ಯಾಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪಶ್ಚಿಮಘಟ್ಟ ಹೊರತು ಪಡಿಸಿ, ಬೆಳಗಾವಿ ವೃತ್ತದ ಇತರ ಭಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು, ನಿರ್ವಹಣೆ ಮಾಡಿ ಹಸಿರು ಹೊದಿಕೆ ವ್ಯಾಪ್ತಿ ಹೆಚ್ಚಿಸುವಂತೆ’ ಸೂಚಿಸಿದರು.
‘ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆ ಹಾಗೂ ಇತರ ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಬೇಕು. ಈ ಸಸಿಗಳ ಪೈಕಿ ಎಷ್ಟು ಬದುಕಿ ಉಳಿದಿವೆ ಎಂಬ ಬಗ್ಗೆ ಆಡಿಟ್ ಮಾಡಿ ವರದಿ ಸಲ್ಲಿಸಬೇಕು’ ಎಂದೂ ತಿಳಿಸಿದರು.
‘ಗೋಕಾಕ ಘಟಪ್ರಭ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿ, ಹೆಚ್ಚುವರಿ ದೋಣಿಗಳನ್ನು ನಿಯೋಜಿಸಿ ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು’ ಎಂದು ಈಶ್ವರ ಖಂಡ್ರೆ ತಿಳಿಸಿದರು.
‘ವಜ್ರಪೋಹ ಜಲಪಾತಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ವನ್ಯಜೀವಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರುಗಳು ಬಂದಿದ್ದು, ಪ್ರವೇಶ ನಿರ್ಬಂಧಿಸುವಂತೆ ಹಾಗೂ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಬೇಕು’ ಎಂದೂ ತಿಳಿಸಿದರು.
ಅರಣ್ಯ ಒತ್ತುವರಿ ತೆರವಿಗೆ ಸೂಚನೆ: ‘ಪಟ್ಟಾಭೂಮಿ ಸೇರಿ ಜೀವನೋಪಾಯಕ್ಕೆ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡವರಿಗೆ ತೊಂದರೆ ನೀಡದೇ, 3 ಎಕರೆಗಿಂತ ಹೆಚ್ಚಿನ ಹಾಗೂ 2015ರ ನಂತರದ ಎಲ್ಲ ಹೊಸ ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದು ಸಚಿವ ಸೂಚಿಸಿದರು.
ಒತ್ತುವರಿ ತೆರವು ಮಾಡಿದ ಪ್ರದೇಶದಲ್ಲಿ ಸ್ಥಳೀಯ ಪ್ರಭೇದದ ಸಸ್ಯಗಳನ್ನು ನೆಟ್ಟು ನೆಡುತೋಪುಗಳನ್ನು ನಿರ್ಮಿಸುವ ಮೂಲಕ ಹಸಿರು ವಲಯ ಹೆಚ್ಚಿಸುವಂತೆ ಆದೇಶ ನೀಡಿದರು.
ಜನ ಸಂಪರ್ಕ ಸಭೆ ನಡೆಸಲು ನಿರ್ದೇಶನ: ‘ಮಾನವ– ವನ್ಯಜೀವಿ ಸಂಘರ್ಷ ಇರುವ ಅರಣ್ಯದಂಚಿನ ಗ್ರಾಮಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ, ಜನರಿಗೆ ಜಾಗೃತಿ ಮೂಡಿಸಲು ಮತ್ತು ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ವನ್ಯಜೀವಿಗಳ ಸಾವಿಗೆ ಕಾರಣವಾಗದಂತೆ ಅರಿವು ಮೂಡಿಸಲು ಹಾಗೂ ವನ್ಯಜೀವಿ ಕಾನೂನಿನ ಬಗ್ಗೆ ತಿಳಿಸಬೇಕು’ ಎಂದೂ ಸೂಚಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಮತ್ತಿತರರು ಪಾಲ್ಗೊಂಡಿದ್ದರು.
Cut-off box - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.