ಬೆಳಗಾವಿ: ‘ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ, ಈಗಾಗಲೇ ಉನ್ನತ ಹುದ್ದೆಯಲ್ಲಿ ಇರುವವರು ತ್ಯಾಗ ಮಾಡಿದರೆ ಒಳ್ಳೆಯದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಖಂಡರೆಲ್ಲರೂ ಸೇರಿ ಚರ್ಚಿಸಿ ನಿರ್ಧಾರಕ್ಕೆ ಬರುವಂತೆ ಆರ್ಎಸ್ಎಸ್ನವರು ಸಲಹೆ ನೀಡಿದ್ದಾರೆ. ಸ್ವಾರ್ಥ ಇಟ್ಟುಕೊಂಡು ಸಭೆ ನಡೆಸಿದರೆ ಸರಿಯಾಗುವುದಿಲ್ಲ. ಆರ್ಎಸ್ಎಸ್ ನಾಯಕರ ಸೂಚನೆ ಪಾಲಿಸಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕಾಗುತ್ತದೆ’ ಎಂದರು.
‘ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು ಎನ್ನುವುದು ನನ್ನ ಉದ್ದೇಶ. ಮನಸ್ಸು ಮಾಡಿದರೆ ನನ್ನ ಮಗನನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದು. ಆದರೆ, ನಾನು ಕಾರ್ಯಕರ್ತನನ್ನು ಆ ಸ್ಥಾನಕ್ಕೆ ತರುತ್ತೇನೆ’ ಎಂದು ಹೇಳಿದರು.
ಅವಿರೋಧ ಆಯ್ಕೆಗೆ ಆರ್ಎಸ್ಎಸ್ ನಾಯಕರು ಸಲಹೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ಸಭೆಯಲ್ಲಿ ನಾನಿರಲಿಲ್ಲ. ಮುಖಂಡ ಅರವಿಂದರಾವ್ ದೇಶಪಾಂಡೆ ನಮ್ಮ ಮಾರ್ಗದರ್ಶಕರಾಗಿ ಹೇಳಿದ್ದಾರೆ. ಎಲ್ಲರೂ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಸಹಕಾರ ರಂಗದಲ್ಲಿ ಪಕ್ಷ ಬರುವುದಿಲ್ಲ. 20 ವರ್ಷಗಳಿಂದ ಡಿಸಿಸಿ ಬ್ಯಾಂಕ್ನಲ್ಲಿ ಎಲ್ಲಾ ಪಕ್ಷದವರೂ ನಿರ್ದೇಶಕರಾಗಿದ್ದಾರೆ. ಈಗಿನ ಚುನಾವಣೆ ವಿಷಯದಲ್ಲಿ ಶಾಸಕರಾದ ಉಮೇಶ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಕೈಗೊಳ್ಳುವ ನಿರ್ಣಯಕ್ಕೆ ಬದ್ಧವಾಗಿದ್ದೇನೆ. ಅವರು ಹೇಳಿದ ಪ್ರಕಾರ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.