
ಜೈಲು (ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಜಿಲ್ಲಾ ಪೋಕ್ಸೊ ನ್ಯಾಯಾಲಯ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಸಂಕೇಶ್ವರದ ದರ್ಶನ್ ಭಗವಂತ ಹುಣಶ್ಯಾಳ ಶಿಕ್ಷೆಗೊಳಗಾದವ. ಬಾಲಕಿಯನ್ನು ಪ್ರೀತಿಸಿದ ಈತ, 2024ರ ಆಗಸ್ಟ್ 25ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಕಾಲೇಜು ಮುಗಿಸಿ ಮನೆಗೆ ಮರಳುವ ವೇಳೆ ನಿಡಸೋಸಿ ರಸ್ತೆಯಲ್ಲಿ ಆಕೆಯನ್ನು ತಡೆದು ಓಡಿಹೋಗುವ ಸಂಚು ರೂಪಿಸಿದ್ದ. ಆ.27ರಂದು ರಾತ್ರಿ ಬಾಲಕಿಯನ್ನು ತನ್ನ ಬೈಕಿನಲ್ಲಿ ಕರೆದೊಯ್ದು ಅಥಣಿಯಲ್ಲಿ ಬಾಡಿಗೆ ಮನೆಯನ್ನು ತೆಗೆದುಕೊಂಡು ತಾವಿಬ್ಬರೂ ದಂಪತಿ ಎಂದು ಹೇಳಿ ಮನೆ ಬಾಡಿಗೆ ಪಡೆದಿದ್ದ. ಬಾಲಕಿಗೆ ಮನಸಿಲ್ಲದಿದ್ದರೂ ಅತ್ಯಾಚಾರ ಎಸಗಿದ್ದ.
ಮಗಳು ಕಾಣೆಯಾದ ಬಗ್ಗೆ ಪಾಲಕರು ದೂರು ದಾಖಲಿಸಿದ್ದರು. ತನಿಖಾಧಿಕಾರಿ ಕೆ.ಬಿ ಕಂಠಿ ಪ್ರಕರಣ ದಾಖಲಿಸಿದ್ದರು. ಸಂಕೇಶ್ವರ ಇನ್ಸ್ಪೆಕ್ಟರ್ ಆರ್.ಎಸ್. ಖೋತ ಮತ್ತು ಎಸ್.ಎಂ. ಆವೂಜಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು 8 ಸಾಕ್ಷಿಗಳ ವಿಚಾರಣೆ, 50 ದಾಖಲೆಗಳು ಹಾಗೂ 6 ಮುದ್ದೆಮಾಲುಗಳ ಆಧಾರದ ಮೇಲೆ ತೀರ್ಪು ಪ್ರಕಟಿಸಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹4 ಲಕ್ಷ ಪರಿಹಾರ ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದರು.
ಗಾಂಜಾ ಮಾರಾಟ: ವ್ಯಕ್ತಿ ಬಂಧನ
ಸದಲಗಾ– ಬೇಡಕಿಹಾಳ ರಸ್ತೆಯ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ವಿನಾಯಕ ದಿನೇಶ ಕರವೀರ ಎಂಬ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಳಿ ಇದ್ದ ₹4,000 ಬೆಲೆ ಬಾಳುವ 58 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.