ADVERTISEMENT

ಸರ್ಕಾರದಿಂದ ಪ್ರಜಾಪ್ರಭುತ್ವ ವಿರೋಧಿ ನಡೆ–ಶಾಸಕ ಸತೀಶ ಜಾರಕಿಹೊಳಿ ಆರೋಪ

ಶಾಸಕ ಸತೀಶ ಜಾರಕಿಹೊಳಿ ಆರೋಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 14:30 IST
Last Updated 20 ನವೆಂಬರ್ 2020, 14:30 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಗೋಕಾಕ: ‘ಮರಾಠಾ ಅಭಿವೃದ್ಧಿ ನಿಗಮ ರಚನೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ತಂತ್ರವಷ್ಟೇ. ಹಿಂದುಳಿದವರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಬೇಕಾದ ಸರ್ಕಾರ ರಾಜಕೀಯ ಉದ್ದೇಶಗಳಿಂದಾಗಿ ಕೆಲವು ಜಾತಿಗಳವರಿಗೆ ನಿಗಮ ಸ್ಥಾಪನೆಗೆ ಮುಂದಾಗುತ್ತಿರುವ ಬಿಜೆಪಿ ಸರ್ಕಾರದ ನಿಲುವು ಪ್ರಜಾಪ್ರಭುತ್ವ ವಿರೋಧಿಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಭಾರತದಲ್ಲಿ ಸಾವಿರರಾರು ಜಾತಿಗಳಿವೆ. ಎಲ್ಲಿರಿಗೂ ಪ್ರಾಧಿಕಾರ ರಚಿಸಲು ಸಾಧ್ಯವೇ ಮತ್ತು ಅದು ಸಮಂಜಸವೇ?’ ಎಂದು ಕೇಳಿದರು.

‘ಸರ್ಕಾರದ ನಡೆ ವೈಜ್ಞಾನಿಕ ಮತ್ತು ವಾಸ್ತವವನ್ನು ಅಧರಿಸಿರಬೇಕು. ಅದನ್ನು ಬಿಟ್ಟು ಯಾವುದೇ ಅಧ್ಯಯನ ನಡೆಸದೆ ಸರ್ಕಾರ ಕೈಗೊಂಡ ನಿರ್ಧಾರ ಸಮಾಜ ವಿರೋಧಿ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿಯೂ ಆಗಿದೆ’ ಎಂದು ಟೀಕಿಸಿದರು.

ADVERTISEMENT

‘ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ವಿಚಾರದಲ್ಲಿ ಮಹಾಜನ ಆಯೋಗದ ವರದಿ ಅಂತಿಮ. ಗಡಿ ಭಾಗದಲ್ಲಿ ಹಾಗೂ ಉಭಯ ರಾಜಗಳಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಸೌಹಾರ್ದದಿಂದ ಬದುಕು ನಡೆಸುತ್ತಿರುವಾಗ ರಾಜಕೀಯ ಪ್ರೇರಿತವಾಗಿ ರಾಜಕಾರಣಿಗಳು ನೀಡುವ ಹೇಳಿಕೆಗಳಿಗೆ ಯಾರೂ ಮಹತ್ವ ನೀಡುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಅಭಿವೃದ್ಧಿ ಕಾರ್ಯದಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರವು ರೈತರು ಮತ್ತು ಸಂತ್ರಸ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲಿ ನಡೆಸುತ್ತಿದೆ’ ಎಂದು ಕುಟುಕಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಸಿಸಿಯಿಂದ ನೇಮಿಸಿರುವ ಸಮಿತಿಯ ಮುಖಂಡರು ಸಮಾಲೋಚನೆ ನಡೆಸುತ್ತೇವೆ. ಅಭಿಪ್ರಾಯ ಸಂಗ್ರಹಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.