ADVERTISEMENT

ನಮಗೆ ಕಾಂಗ್ರೆಸ್‌ನವರ ಪ್ರಮಾಣಪತ್ರ ಬೇಕಿಲ್ಲ: ಬೊಮ್ಮಾಯಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 12:25 IST
Last Updated 7 ಡಿಸೆಂಬರ್ 2021, 12:25 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಳಗಾವಿ: 'ನಮಗೆ ಕಾಂಗ್ರೆಸ್‌ನವರ ಪ್ರಮಾಣಪತ್ರ ಬೇಕಿಲ್ಲ. ಹತಾಶೆಯಿಂದ ಆ ಪಕ್ಷದವರು ಆಡುತ್ತಿರುವ ಮಾತುಗಳಿಗೆ ಕಿವಿಕೊಡಬಾರದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ರಿಜೆಂಟ ರೆಸಾರ್ಟ್ಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

'ಎಲ್ಲ ವರ್ಗದವರೂ ನಮ್ಮ ಪಕ್ಷಕ್ಕೆ ಬೆಂಬಲ ಕೊಡುತ್ತಿದ್ದಾರೆ. ಮತದಾರರಾದಸ್ಥಳೀಯ ಸಂಸ್ಥೆಗಳ‌ ಚುನಾಯಿತ ಪ್ರತಿನಿಧಿಗಳ ಮನವೊಲಿಕೆಯನ್ನು ಅವರೊಂದಿಗೆ ‌ಸಂಪರ್ಕದಲ್ಲಿರುವ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕು. ಎಲ್ಲಿ ನಮ್ಮ ಶಾಸಕರು ಇಲ್ಲವೋ ಅಲ್ಲೂ ನಾವು ಮತ ಗಳಿಕೆಯಲ್ಲಿ ಹಿಂದೆ‌ ಬೀಳಬಾರದು' ಎಂದು ಕೋರಿದರು.

ADVERTISEMENT

'ಇದು ಚುನಾವಣೆ ವರ್ಷ‌. ರಾಜಕೀಯ ಚಟುವಟಿಕೆಗಳುತೀವ್ರವಾಗಿ ನಡೆಯುತ್ತವೆ. ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಜವಾಬ್ದಾರಿ ಅರಿಯದೆ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಆ ಪಕ್ಷದವರಿಗೆ ಜನರಿಂದ ಯಾವುದೇ ಪ್ರಮಾಣಪತ್ರ ಬೇಕಿಲ್ಲ. ಆದರೆ ನಮಗೆ ಬೇಕಾಗುತ್ತದೆ. ಜನರು ಬಹಳ ವಿಶ್ವಾಸವನ್ನು ನಮ್ಮ ಮೇಲೆ ಇಟ್ಟಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದರು.

'ಅಭಿವೃದ್ಧಿ ವಿಚಾರದಿಂದ ದೂರ ಉಳಿದು, ಚುನಾವಣೆಯ ನಿರೂಪಣೆಯನ್ನೇ ಬದಲಾಯಿಸಲು ಕಾಂಗ್ರೆಸ್‌ನವರು ಪ್ರಯತ್ನಪಡುತ್ತಿದ್ದಾರೆ' ಎಂದು ಟೀಕಿಸಿದರು.

'ಬೆಳಗಾವಿಯಲ್ಲಿ ಪಕ್ಷದ ಅಭ್ಯರ್ಥಿಮಹಾಂತೇಶ ಕವಟಗಿಮಠ ಆಯ್ಕೆ ಸೂರ್ಯನಷ್ಟೇ ಸತ್ಯ. ಆದರೆ ಅವರು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದೇ ಆಯ್ಕೆ ಆಗಬೇಕು. ಆಗ ಇಡೀ ರಾಜ್ಯಕ್ಕೆ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ ಎಂದರು.

'ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 18 ವಿಧಾನಸಭಾ ಕ್ಷೇತ್ರಗಳನ್ನೂ ನಾವು ಗೆಲ್ಲಬಹುದು ಎಂದರು.

'ಇಲ್ಲಿನ ಎಲ್ಲ ಶಕ್ತಿಯೂ ಕೇಂದ್ರೀಕೃತವಾಗಿ, ಸಹಕಾರದಿಂದ ನಡೆದುಕೊಳ್ಳಬೇಕು.ತ್ರಿಕೋನ ಸ್ಪರ್ಧೆಯಲ್ಲಿ ಆತಂಕವಿದ್ದರೆ ಅದು ಕಾಂಗ್ರೆಸ್ ಪಕ್ಷದವರಿಗೆ ಮಾತ್ರ. ಅವರ ನೆಲ ಸರಿದಿದೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿ‌.ಕೆ.‌ ಶಿವಕುಮಾರ್ ತಾಲ್ಲೂಕು ತಾಲ್ಲೂಕಿಗೆ ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.

'ರಾಜಕೀಯ ಶಕ್ತಿಯ ಸಾರ್ಥಕತೆಯನ್ನು ನಾವಿಲ್ಲಿ ತೋರಿಸಬೇಕಾಗುತ್ತದೆ' ಎಂದರು.

'ಬೆಳಗಾವಿಯವರಿಗೆ ದೇಶ ಕಟ್ಟುವ ಶಕ್ತಿ ಇದೆ. ನಾನು ಇಲ್ಲಿಂದ ಬೂಸ್ಟರ್ ಡೋಸ್ ಪಡೆದುಕೊಂಡು ಹೋಗಲು ಬಂದಿದ್ದೇನೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.