ಬೆಳಗಾವಿ: ‘ಗೋಕಾಕ ತಾಲ್ಲೂಕಿನ ಪರಿಸ್ಥಿತಿಯೇ ಬೇರೆ ಇದೆ. ಅದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕಾದ್ದರಿಂದ ನಾನು ಏಜೆಂಟ್, ಕ್ಲರ್ಕ್, ಸಹಾಯಕ ಆಗುವುದಕ್ಕೂ ಸಿದ್ಧವಿದ್ದೇನೆ. ಅವರನ್ನಷ್ಟೆ (ಪ್ರತಿಸ್ಪರ್ಧಿಗಳು) ಬಿಟ್ಟರೆ ಕಷ್ಟವಾಗುತ್ತದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯ ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ವಿಧಾನಪರಿಷತ್ ಚುನಾವಣೆಯಲ್ಲಿ ಗೋಕಾಕ ಹಾಗೂ ಅರಭಾವಿಯಲ್ಲಿ ಶೇ 30ರಷ್ಟು ಮತಗಳು ನಮಗೆ ಬರಲಿದೆ. ನಮ್ಮ ಬೆಂಬಲಿಗರೇ 60ರಿಂದ 70 ಮಂದಿ ಮತದಾರರಿದ್ದಾರೆ’ ಎಂದು ತಿಳಿಸಿದರು.
‘ನಾನು ಗೋಕಾಕ ತಾಲ್ಲೂಕಿನ ಗುಜನಾಳ ಮತಗಟ್ಟೆ ಏಜೆಂಟ್ ಆಗುತ್ತೇನೆ. ಮುಖಂಡ ಅಶೋಕ ಪೂಜಾರಿ ಅವರನ್ನು ಮಮದಾಪುರಕ್ಕೆ ಹಾಕಿದ್ದೇವೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಏಜೆಂಟ್ ಆಗುವುದಕ್ಕೆ ತೊಂದರೆ ಇಲ್ಲ. ಚುನಾವಣೆ ಆದ ಮೇಲೆ ಪಕ್ಷ ಸೇರಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ಅವರನ್ನೂ ಏಜೆಂಟ್ ಮಾಡುತ್ತೇವೆ. ಮುಖಂಡ ಅರವಿಂದ ದಳವಾಯಿ ಕೌಜಲಗಿಯಲ್ಲಿ ಏಜೆಂಟ್ ಆಗುವರು. ಪ್ರತಿ ಪಂಚಾಯಿತಿಗೂ ಇಬ್ಬರನ್ನು ನಿಯೋಜಿಸಲಾಗುವುದು. ಉಪಾಹಾರ, ಊಟ ಎರಡನ್ನೂ ಪಂಚಾಯಿತಿ ಮುಂದೆಯೇ ಅವರಿಗೆ ನೀಡಲಾಗುವುದು. ಮತಪೆಟ್ಟಿಗೆ ಸೀಲ್ ಆಗುವವರೆಗೂ ಅಲ್ಲಿಯೇ ಇದ್ದು ಕಣ್ಣಿಡಲಿದ್ದಾರೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.