ಉಗರಗೋಳ: ಸವದತ್ತಿ ತಾಲ್ಲೂಕಿನ ಉಗರಗೋಳ ಬಳಿ ಇರುವ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ಎಣಿಸಲಾಯಿತು. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿಯೇ ₹ 1.39 ಕೋಟಿ ನಗದು, 177 ಗ್ರಾಂ ಚಿನ್ನಾಭರಣ, 3.54 ಕೆ.ಜಿ. ತೂಕದ ಬೆಳ್ಳಿ ಸಲಕರಣೆಗಳು ಈ ಬಾರಿ ಸಂಗ್ರಹವಾಗಿವೆ.
ಈ ಹಿಂದೆ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಹುಂಡಿಯಲ್ಲಿ ₹ 33.44 ಲಕ್ಷ ನಗದು, ₹ 5.11 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 62,390 ಮೌಲ್ಯದ ಬೆಳ್ಳಿ ಆಭರಣಗಳು ಸೇರಿ ಒಟ್ಟು₹ 2.15 ಕೋಟಿ ದೇಣಿಗೆ ಸಂಗ್ರಹವಾಗಿತ್ತು. ಅದಕ್ಕೂ ಮುನ್ನ ಅಂದರೆ; ಜೂನ್ 24ರಂದಿ ನಡೆದ ಒಂದೂವರೆ ತಿಂಗಳ ದೇಣಿಗೆ ಎಣಿಕೆಯಲ್ಲಿ ₹1.13 ಕೋಟಿ ನಗದು, ₹22 ಲಕ್ಷ ಮೌಲ್ಯದ ಚಿನ್ನ, ₹3 ಲಕ್ಷದ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿದ್ದವು.
ಅಂದರೆ; ಏಪ್ರಿಲ್ನಿಂದ ಆಗಸ್ಟ್ವರೆಗಿನ ಐದು ತಿಂಗಳ ಅವಧಿಯಲ್ಲಿ ₹ 4.60 ಕೋಟಿಗೂ
ಅಧಿಕ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಹರಕೆ ಹೊತ್ತವರ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ದೇವಿಗೆ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವುದು ರೂಢಿ. ಅದರಂತೆ ಪ್ರಸಕ್ತ ಅವಧಿಯಲ್ಲೂ ಉತ್ತಮ ಆದಾಯ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ ತಿಳಿಸಿದ್ದಾರೆ.
ಮಹರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಉತ್ತರ ಭಾರತದಿಂದಲೂ ಅಪಾರ ಭಕ್ತರು ಈ ಬಾರಿ ಭೇಟಿ ನೀಡುವುದು ಮುಂದುವರಿದಿದೆ. ಈಗ ನವರಾತ್ರಿ ಉತ್ಸವ ಹಾಗೂ ದಸರಾ ಸಂದರ್ಭದಲ್ಲಿ ಶಕ್ತಿದೇವಿಯನ್ನು ಆರಾಧನೆ ಮಾಡುವವರು ಸಾಗರೋಪಾದಿಯಲ್ಲಿ ಹರಿದುಬರಲಿದ್ದಾರೆ. ಹಾಗಾಗಿ, ಇನ್ನೂ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ ಎಂಬುದು ದೇವಸ್ಥಾನದ ಮೂಲಗಳ ಮಾಹಿತಿ.
‘ಜಿಲ್ಲೆ ವಿಭಜನೆಗೂ ಪ್ರಾರ್ಥನೆ’
ನಿರೀಕ್ಷೆಯಂತೆ ಯಲ್ಲಮ್ಮನ ಹುಂಡಿಯಲ್ಲಿ ಹಲವು ವಿಚಿತ್ರ ಬೇಡಿಕೆಗಳ ಪತ್ರಗಳೂ ಲಭ್ಯವಾಗಿವೆ.
‘ಬೆಳಗಾವಿ ಜಿಲ್ಲೆಯನ್ನು ಒಡೆದು ಚಿಕ್ಕೋಡಿ, ಗೋಕಾಕ ಹಾಗೂ ಬೈಲಹೊಂಗಲ ಕೇಂದ್ರವಾಗಿ ಹೊಸ ಜಿಲ್ಲೆ ರಚನೆ ಮಾಡಲು ಸಿ.ಎಂ ಅವರಿಗೆ ಬುದ್ಧಿ ಕೊಡು’ ಎಂಬ ಒಂದು ಅನಾಮಿಕ ಪತ್ರವೂ ಹಿಂಡಿಯಲ್ಲಿ ಸಿಕ್ಕಿದೆ.
ವಿಭಜನೆಯಾದರೆ ಯಾವ ತಾಲ್ಲೂಕುಗಳು ಯಾವ ಜಿಲ್ಲೆಗೆ ಸೇರಬೇಕು ಎಂಬ ಬಗ್ಗೆಯೂ ಇದರಲ್ಲಿ ಬರೆಯಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.