ಬೆಳಗಾವಿ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನ ಕುಟುಂಬದ ಸದಸ್ಯರನ್ನು ಬಂಧಿಸಬಾರದು ಎಂದು ವಿಷ ಸೇವಿಸಿ ಪ್ರತಿಭಟನೆ ಮಾಡಿದ್ದ ಬೈಲಹೊಂಗಲ ತಾಲ್ಲೂಕಿನ ಕುರಗುಂದ ಗ್ರಾಮದ ಸಂಜು ನಾಯ್ಕರ್ ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇತ್ತೀಚೆಗೆ ಗ್ರಾಮದಲ್ಲಿ ದ್ಯಾಮನ್ನ ನಾಗಪ್ಪ ವನ್ನೂರ ಅವರ ಕೊಲೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜು ನಾಯ್ಕರ್ ಅವರ ಕುಟುಂಬದ ಸದಸ್ಯರನ್ನು ಬಂಧಿಸಲು ಪೊಲೀಸರು ತಡಕಾಡುತ್ತಿದ್ದರು. ಇದನ್ನು ಖಂಡಿಸಿ, ಸಂಜು ಅವರು ಗುರುವಾರ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದರು. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.