ಬೆಳಗಾವಿ: ‘ಕಾಂಗ್ರೆಸ್ ಶಾಸಕರಿಗೂ ಸರ್ಕಾರ ಅನುದಾನ ನೀಡುತ್ತಿಲ್ಲ. ಇದರಿಂದ ಕುದ್ದು ಹೋಗಿರುವ ಹಲವರು ಈ ಸರ್ಕಾರಕ್ಕೆ ಒಂದು ಗತಿ ಕಾಣಿಸಲು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ಸರ್ಕಾರದ ಗತಿ ಏನಾಗುತ್ತದೆ ನೋಡಿ’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
‘ಸರ್ಕಾರ ಕೆಡವಲು ಬಿಜೆಪಿ ಏನೂ ಮಾಡಬೇಕಿಲ್ಲ. ಅವರ ಪಕ್ಷದವರೇ ತುದಿಗಾಲಲ್ಲಿ ನಿಂತಿದ್ದಾರೆ. ಐದು ‘ಗ್ಯಾರಂಟಿ’ಗಳನ್ನು ಜಾರಿಗೆ ತಂದಾಗ ನಾವು ಸ್ವಾಗತಿಸಿದ್ದೆವು. ನಂತರದ ದಿನಗಳಲ್ಲಿ ಎಲ್ಲ ಯೋಜನೆಗಳಿಗೂ ಇನ್ನಿಲ್ಲದ ಷರತ್ತುಗಳನ್ನು ಹಾಕಿದ್ದಾರೆ. ಹೀಗಾಗಿ, ಜನರಿಗೂ ಇವು ಇಷ್ಟವಾಗಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆಯ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ’ ಎಂದರು.
‘ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತೀರಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರಾಣಿ, ‘ಪಕ್ಷವು ಯಾವ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.