ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸುಧಾರಣೆ: ಡಾ.ಕರಿಸಿದ್ದಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 13:34 IST
Last Updated 2 ಸೆಪ್ಟೆಂಬರ್ 2021, 13:34 IST
ಬೆಳಗಾವಿಯ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತ ಕಾರ್ಯಕ್ರಮವನ್ನು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ಸಂಸದೆ ಮಂಗಲಾ ಅಂಗಡಿ ಇದ್ದಾರೆ
ಬೆಳಗಾವಿಯ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತ ಕಾರ್ಯಕ್ರಮವನ್ನು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಆನಂದ ದೇಶಪಾಂಡೆ, ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ಸಂಸದೆ ಮಂಗಲಾ ಅಂಗಡಿ ಇದ್ದಾರೆ   

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ-2020’ಯು ದೇಶದ ಶಾಲಾ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಗೆ ಹಾಗೂ ಸುಧಾರಣೆಗೆ ದಾರಿ ಮಾಡಿಕೊಡುತ್ತದೆ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ.ಕರಿಸಿದ್ದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ’ ಕುರಿತು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು.

‘ನೀತಿಯು 2030ರ ವೇಳೆಗೆ ಶಾಲಾ ಶಿಕ್ಷಣದಲ್ಲಿ ಶಾಲಾ ಪೂರ್ವದಿಂದ ಮಾಧ್ಯಮಿಕ ಹಂತದವರೆಗೆ ಶಿಕ್ಷಣದ ಸಾರ್ವತ್ರೀಕರಣದ ಗುರಿಯನ್ನು ಹೊಂದಿದೆ. ಅಲ್ಲದೇ ಶಾಲೆಯಿಂದ ಹೊರಗುಳಿದ ಸುಮಾರು 2 ಕೋಟಿ ಮಕ್ಕಳನ್ನು ಮುಖ್ಯ ಶಿಕ್ಷಣದ ವಾಹಿನಿಗೆ ತರುತ್ತದೆ. ಹೀಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ವಿಶ್ವವಿದ್ಯಾಲಯದವರೆಗಿನ ಬೋಧಕ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿ ಮತ್ತು ಬದ್ಧತೆಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು’ ಎಂದು ತಿಳಿಸಿದರು.

ADVERTISEMENT

ಬಜೆಟ್‌ ಹೆಚ್ಚಳ:

‘ಹೊಸ ಪಠ್ಯಕ್ರಮವು 12 ವರ್ಷಗಳ ಶಾಲಾ ಶಿಕ್ಷಣ ಮತ್ತು 3 ವರ್ಷಗಳ ಪಠ್ಯ ಹಾಗೂ ಪಠ್ಯೇತರ ಸ್ಕೀಮ್‌ಗಳ ನಡುವೆ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುತ್ತದೆ. ಅಲ್ಲದೇ ಉನ್ನತ ಶಿಕ್ಷಣದಲ್ಲಿ 2025ರ ವೇಳೆಗೆ ಶೈಕ್ಷಣಿಕ ಬಜೆಟ್‌ ಅನ್ನು ಶೇ. 50ಕ್ಕೆ ಏರಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

‘ಯಾವುದೇ ವಿದ್ಯಾರ್ಥಿಯು ಕಾರಣಾಂತರಗಳಿಂದ ಶಿಕ್ಷಣವನ್ನು ಮೊಟಕುಗೊಳಿಸಿದರೂ ಅವರಿಗೆ ಪುನಃ ಶಿಕ್ಷಣ ಮುಂದುವರಿಸಲು ಅನುಮತಿಸಲಾಗಿದೆ. ಕಲಿಕೆಯ ಪ್ರತಿಯೊಂದು ಹಂತದಲ್ಲಿ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಕಾಳಜಿಪೂರ್ವಕ ಮಾರ್ಗದರ್ಶನದ ಜೊತೆಗೆ ಸಂಶೋಧನಾ ಪ್ರವೃತ್ತಿ ಬೆಳೆಯಲು ಆದ್ಯತೆ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಸೌಲಭ್ಯ ಒದಗಿಸಲು ಕ್ರಮ:

ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ, ‘ಹೊಸ ಶಿಕ್ಷಣ ನೀತಿಯ ಅನುಗಣವಾಗಿ ಸಕಲ ಸೌಲಭ್ಯಗಳನ್ನು ಸಂಸ್ಥೆಯಲ್ಲಿ ಒದಗಿಸಲಾಗುವುದು. ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂಸದೆ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷೆ ಮಂಗಲಾ ಸುರೇಶ ಅಂಗಡಿ, ನಿರ್ದೇಶಕಿ ಶ್ರದ್ಧಾ ಅಂಗಡಿ, ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಡಾ.ಆನಂದ ದೇಶಪಾಂಡೆ, ಪ್ರೊ.ಎಚ್.ಎಸ್. ಪಾಟೀಲ, ಪ್ರೊ.ಸಂಗೀತಾ ದೇಸಾಯಿ, ಆಶಾ ರಜಪೂತ, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರೊ.ಧನಶ್ರೀ ಕುಲಕರ್ಣಿ ನಿರೂಪಿಸಿದರು. ಪ್ರೊ.ಸಂಗೀತಾ ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.