ಮೋಳೆ (ಬೆಳಗಾವಿ ಜಿಲ್ಲೆ): ‘ಗ್ರಾಮ ಪಂಚಾಯ್ತಿ ಸದಸ್ಯರಾದವರ ಕೈ–ಬಾಯಿ ಶುದ್ಧವಾಗಿದ್ದರೆ ಮಾತ್ರ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದು ಕವಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಗ್ರಾಮ ಪಂಚಾಯ್ತಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಅಧಿಕಾರಕ್ಕೆ ಬರುವ ಬಹುತೇಕರು ಸೇವಾ ಮನೋಭಾವ ಇಟ್ಟುಕೊಂಡು ಬರುತ್ತಿಲ್ಲ. ಎಲ್ಲರೂ ದುಡ್ಡು ಮಾಡಲು ಬರುತ್ತಿದ್ದಾರೆ. ₹ 3ರಿಂದ ₹ 5 ಲಕ್ಷ ವೆಚ್ಚ ಮಾಡಿ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದಾರೆ. ಅವರು ಗೆದ್ದ ನಂತರ ಬಂಡವಾಳ ತೆಗೆಯಲು ಹಣ ಗಳಿಸುವ ವ್ಯವಸ್ಥೆಗೆ ಅಂಟಿಕೊಳ್ಳುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಚುನಾವಣೆಯಲ್ಲಿ ಯಾರಿಂದಲೂ ದುಡ್ಡು ಬಯಸುವುದಿಲ್ಲ. ಮತ ನೀಡುತ್ತೇನೆ; ನೀವು ಕೂಡ ಯೋಗ್ಯ ಸೇವೆ ಕೊಡಬೇಕು ಎಂದು ಮತದಾರರೂ ಹೇಳಬೇಕು. ಆಗ ಹಳ್ಳಿಗಳು ಅಭಿವೃದ್ಧಿಯಾಗಲು ಸಾಧ್ಯ. ಎಲ್ಲರೂ ಸ್ವಾರ್ಥ ಬಿಟ್ಟು ಗ್ರಾಮದ ಅಭಿವೃದ್ಧಿಗೆ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
ಮುಖಂಡ ಹಣಮಂತ ಹುಗ್ಗಿ ಅಧ್ಯಕ್ಷತೆ ವಹಿಸಿದ್ದರು. ಎಂ.ಟಿ. ಬಬಲಿ ಉಪನ್ಯಾಸ ನೀಡಿದರು. ಗುತ್ತಿಗೆದಾರ ಶಂಕರ ಮೋರೆ ಅವರನ್ನು ಸತ್ಕರಿಸಲಾಯಿತು.
ಕೆಂಪವಾಡ ಸಕ್ಕರೆ ಕಾರ್ಖಾನೆ ನಿರ್ದೇಶಕ ಯೋಗೀಶ ಪಾಟೀಲ, ತಾ.ಪಂ. ಇಒ ವೀರನಗೌಡ ಎಗನಗೌಡರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೂತಾಳಿ, ಥರಥರೆ, ಉಪಾಧ್ಯಕ್ಷೆ ಮನಿಷಾ ರಾಮು ಮುಂಜೆ, ಪಿಡಿಒ ದಾನಮ್ಮ ಸಜ್ಜನ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ದು ಹವಳೆ, ಬಸವರಾಜ ತೇಲಿ, ಸಂದೀಪ ನಲವಡೆ, ಆನಂದ ಕಣವಿ, ಗಣೇಶ ಮೊಳೇಕರ ಇದ್ದರು.
ತ್ರಿವೇಣಿ ಹವಳೆ ಪ್ರಾರ್ಥಿಸಿದರು. ಗಿರೀಶ ಶಿವಪುರೆ ಸ್ವಾಗತಿಸಿದರು. ಮಹಾದೇವ ಬಡಿಗೇರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.