ADVERTISEMENT

ಕಳ್ಳರ ಹಾವಳಿ ತಪ್ಪಿಸಲು ‘ಸೀಟಿ’ ಅಸ್ತ್ರ

ಮಹಾಂತೇಶ ನಗರದ 11ನೇ ಬಡಾವಣೆಯಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 16:53 IST
Last Updated 7 ಫೆಬ್ರುವರಿ 2023, 16:53 IST
   

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ 11ನೇ ಬಡಾವಣೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದರಿಂದ ಮುಕ್ತಿ ಹೊಂದಲು ಸ್ವತಃ ನಾಗರಿಕರೇ ಸೀಟಿ ಹೊಡೆಯುವ ದಾರಿ ಕಂಡುಕೊಂಡಿದ್ದಾರೆ.

ಕಳವು ಪ್ರಕಟಣಗಳಿಂದ ಬೇಸತ್ತ ಬಡಾವಣೆಯ ಮುಖಂಡರು 120 ಮನೆಗಳಿಗೆ ಸೀಟಿಗಳನ್ನು ವಿತರಿಸಿದ್ದಾರೆ. ಕಳ್ಳರು ಎಂಬ ಅನುಮಾನ ಬಂದ ತಕ್ಷಣ ಅಕ್ಕ‍ಪಕ್ಕದವರೆಲ್ಲ ಸೇರಿಕೊಂಡು ಸೀಟಿ ಊದಬೇಕು ಎಂದೂ ಮಾಹಿತಿ ನೀಡಿದ್ದಾರೆ. ಹಲವರು ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದಾರೆ. ಬಡಾವಣೆಗೆ ಭಿಕ್ಷುಕರು ಬರದಂತೆ, ಬಂದರೂ ಅವರಿಗೆ ಸ್ಪಂದಿಸದಂತೆ ನಿಷೇಧ ಹೇರಿದ್ದಾರೆ.

‘11ನೇ ಸೆಕ್ಟರ್‌ನಲ್ಲಿ ಪದೇಪದೇ ಕಳ್ಳತನ ನಡೆಯುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಅಹವಾಲು ಆಲಿಸಬೇಕು. ಜನರಿಗೆ ಸುರಕ್ಷತೆ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಚಂದ್ರಮತಿ ವೆರ್ಣೇಕರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ADVERTISEMENT

‘ಕಳೆದ ತಿಂಗಳಿಂದ ಮನೆಯಲ್ಲಿ ಕಳವು, ವಾಹನ ಕಳವು ಹಾಗೂ ಸರಗಳ್ಳತನ ಹೆಚ್ಚಿವೆ. ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ. ರಾತ್ರಿ ನಿಯಮಿತವಾಗಿ ಪೊಲೀಸರು ಗಸ್ತು ತಿರುಗುತ್ತಿಲ್ಲ’ ಎಂದು ದೂರಿದರು.

ಪ್ರಸಾದ ಹಿರೇಮಠ, ಪ್ರೇಮ್‌ ಚೌಗಲಾ, ವಿ.ಕೆ.ಕುಲಕರ್ಣಿ, ವಿನಯ ಮಾಳಗಿ, ಬಸವರಾಜ ಪಟ್ಟೇದ, ರೈಭರ್‌ ಮಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.