ADVERTISEMENT

ರಮೇಶ ಮಾತ್ರವಲ್ಲ, ಲಕ್ಷ್ಮಿ ಹೆಬ್ಬಾಳಕರ ಸಕ್ಕರೆ ಕಾರ್ಖಾನೆಯದ್ದೂ ಬಾಕಿ ಇದೆ: ಸಚಿವ

​ಪ್ರಜಾವಾಣಿ ವಾರ್ತೆ
Published 10 ಮೇ 2022, 5:07 IST
Last Updated 10 ಮೇ 2022, 5:07 IST
ಎಸ್‌.ಟಿ ಸೋಮಶೇಖರ್‌
ಎಸ್‌.ಟಿ ಸೋಮಶೇಖರ್‌    

ಬೆಳಗಾವಿ: ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ₹6 ಸಾವಿರ‌ ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ ಎಂದು ಸಹಕಾರ ‌ಸಚಿವ ಎಸ್‌.ಟಿ. ಸೋಮಶೇಖರ್ ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ಅವರ ಸೌಭಾಗ್ಯಲಕ್ಷಿ ಸಕ್ಕರೆ ಕಾರ್ಖಾನೆಯಿಂದ ಹಣ ಬಾಕಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಯಾವೆಲ್ಲ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆಯೋ ಅವುಗಳಿಗೆ ಸಂಬಂಧಿಸಿದವರೆಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಸಾಲ ಕೊಟ್ಟಿದ್ದು, ಅದನ್ನು ಮರುಪಾವತಿ ಮಾಡಲು ನೋಟಿಸ್ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಮಾತ್ರವಲ್ಲ, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ, ಜೆಡಿಎಸ್‌ನ‌‌ ಬಂಡೆಪ್ಪ ಕಾಂಶಪೂರ ಮೊದಲಾದವರು ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಇರುವ 24 ಜನರು ಸಾಲ ಪಡೆದಿದ್ದಾರೆ. ₹2 ಲಕ್ಷದಿಂದ ₹ ಲಕ್ಷ ಸಾಲ ಕಟ್ಟದಿದ್ದಾಗಲೇ ಸಂಬಂಧಿಸಿದವರ ಮನೆಯನ್ನು ಜಪ್ತಿ ಮಾಡುವುದಿಲ್ಲವೇ? ಹಾಗೆಯೇ ನೂರಾರು ಕೋಟಿ ರೂಪಾಯಿ ಸಾಲ ಪಡೆದಿರುವವರ ವಿರುದ್ದ ಅಪೆಕ್ಸ್ ಬ್ಯಾಂಕ್‌ನವರು ಕ್ರಮ ಕೈಗೊಂಡಿದ್ದಾರೆ. ವಸೂಲಾತಿಗೆ ಇಲಾಖೆಯಿಂದಲೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ADVERTISEMENT

ಕೆಲವರು ಬಡ್ಡಿ ಹಾಗೂ ಅಸಲು ಎರಡನ್ನೂ ಕಟ್ಟಿಲ್ಲ. ಕೆಲವರು ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ದಕ್ಷಿಣ ಕನ್ನಡ, ತುಮಕೂರು ಮೊದಲಾದ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ವಸೂಲಿ ಮಾಡಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರದು ಎಷ್ಟು ಕೋಟಿ ರೂಪಾಯಿ ಬಾಕಿ ಇದೆ ಎನ್ನುವುದನ್ನು ಕೂಡ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ; ಮುಚ್ಚು ಮರೆಯೂ‌ ಇಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳಿವೆ. ಗುರಿ ತಲುಪಿವೆಯೇ ಎಂದು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.

ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತಾರೆ. ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುವುದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನಮ್ಮ ಶಾಸಕರಲ್ಲಿ ಯಾರಾರಿಗೆ ಏನೇನು ಸ್ಥಾನಮಾನ ಸಿಕ್ಕಿಲ್ಲ ಎನ್ನುವುದು ಕೇಂದ್ರದ ‌ನಾಯಕರಿಗೆ ಗೊತ್ತಿದೆ ಎಂದರು.

ಡಿಸಿಸಿ ಬ್ಯಾಂಕ್‌ನಿಂದ ₹ 1200 ಕೋಟಿ ಸಾಲ ಕೊಡಲಾಗಿದೆ. ಪಾವತಿಗೆ ಅಪೆಕ್ಸ್ ಬ್ಯಾಂಕ್‌ನಿಂದ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಉಡಾಫೆಯ ಮಾತುಗಳನ್ನು ಆಡುತ್ತಾರೆ. ಅವರ ಕಾಲದಲ್ಲಿ ಹಗರಣಗಳು ಆಗಿಲ್ಲವೇ? ಮುಚ್ಚಿ ಹಾಕಿಲ್ಲವೇ? ಎಲ್ಪವೂ ಗೊತ್ತಿದೆ ಎಂದು ಕಿಡಿಕಾರಿದರು.

ಖಾಸಗಿ ತರಕಾರಿ ಮಾರುಕಟ್ಟೆ ಆರಂಭವಾಗಿರುವುದು ನನ್ನ ಗಮನಕ್ಕೂ ಬಂದಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಾದ ನಂತರ ಎಲ್ಲಿ ಬೇಕಾದರೂ ಉತ್ಪನ್ನಗಳನ್ನು ಮಾರಲು ಅವಕಾಶವಿದೆ. ಇಲ್ಲಿನ ಎಪಿಎಂಸಿಗೆ ನಷ್ಟವಾಗುತ್ತಿದೆ ಎನ್ನುವುದು ಗೊತ್ತಾಗಿದೆ. ರೈತರಿಗೆ ‌ನಿರ್ಬಂಧವಿಲ್ಲ. ಯಾರಿಗೆ ಬೇಕಾದರೂ, ಎಲ್ಲಾದರೂ ಮಾರಬಹುದಾಗಿದೆ. ಪೈಪೋಟಿ ಎದುರಿಸಲು ನಮ್ಮ ಎಪಿಎಂಸಿಗಳು ಕೂಡ ಸಿದ್ಧವಾಗಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.