ADVERTISEMENT

ನರ್ಸಿಂಗ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:16 IST
Last Updated 19 ಫೆಬ್ರುವರಿ 2026, 5:16 IST
ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನರ್ಸಿಂಗ್‌ ವಿಭಾಗದ ಸಿಬ್ಬಂದಿ ಮತ್ತು  ನೌಕರರು ಬುಧವಾರ ಪ್ರತಿಭಟನೆ ನಡೆಸಿದರು
ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನರ್ಸಿಂಗ್‌ ವಿಭಾಗದ ಸಿಬ್ಬಂದಿ ಮತ್ತು  ನೌಕರರು ಬುಧವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿ ಬಸವರಾಜ ಕಬಾಡಗಿ ಅವರ ಮೇಲೆ ಹಲ್ಲೆ ನಡೆಸಿದ  ಘಟನೆ ಖಂಡಿಸಿ, ಆಸ್ಪತ್ರೆ ಆವರಣದಲ್ಲಿ ನರ್ಸಿಂಗ್‌ ವಿಭಾಗದ  ನೌಕರರು ಮತ್ತು ಸಿಬ್ಬಂದಿ ಬುಧವಾರ ಪ್ರತಿಭಟನೆ ನಡೆಸಿದರು. ತುರ್ತು ಚಿಕಿತ್ಸೆ ಘಟಕ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

‘ನಾವು 24x7 ಮಾದರಿಯಲ್ಲಿ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತೇವೆ. ಆದರೆ, ಮಂಗಳವಾರ ಮಾನಸಿಕ ಅಸ್ವಸ್ಥ ಬಾಲಕಿಯ ಸಂಬಂಧಿಕರು ಸೂಪರ್‌ ಸ್ಪೆಷಾಲಿಟಿ ವಿಭಾಗದಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಲ್ಲಾಡಳಿತ ನಮ್ಮ ಭದ್ರತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಾನು ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಮಂಗಳವಾರ ಸಂಜೆ ಕರ್ತವ್ಯದಲ್ಲಿದ್ದೆ. ಬೇರೆ ವಾರ್ಡಿನ ಮಾನಸಿಕ ಅಸ್ವಸ್ಥ ಬಾಲಕಿಯೊಬ್ಬಳು ಕುಡಿಯುವ ನೀರು ಹೊತ್ತುಕೊಂಡು ಹೋಗುತ್ತಿದ್ದಾಗ, ನೆಲದ ಮೇಲೆ ಚೆಲ್ಲಿದಳು. ಹೀಗೆ ನೀರು ಚೆಲ್ಲಬೇಡಿ ಎಂದಿದ್ದಕ್ಕೆ ನನಗೆ ಕಚ್ಚಿದ್ದಾಳೆ. ಆಗ ಅವಳನ್ನು ದೂರ ತಳ್ಳಲು ಕಪಾಳಮೋಕ್ಷ ಮಾಡಿದೆನು. ನಂತರ ರೋಗಿ ಕಡೆಯ ಏಳು ಸಂಬಂಧಿಕರು ಬಂದು ನನ್ನ ಮೇಲೆ ಹಲ್ಲೆ ನಡೆಸಿ ಗಾಯಗೊಳಿದಿದ್ದಾರೆ’ ಎಂದು ಬಸವರಾಜ ಕಬಾಡಗಿ ಹೇಳಿದರು.

ADVERTISEMENT

‘ಈ ಘಟನೆಯಿಂದ ಸಿಬ್ಬಂದಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ. ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಂಥ ಘಟನೆಗಳನ್ನು ತಡೆಗಟ್ಟಲು ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆಯುತ್ತೇವೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಗಾಯಗೊಂಡ ನರ್ಸಿಂಗ್‌ ಸಿಬ್ಬಂದಿ ಬಸವರಾಜ ಕಬಾಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.