ಬೆಳಗಾವಿ: ‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ರೈತರು ಅಥವಾ ಅವರ ಕುಟುಂಬದ ಸದಸ್ಯರು, ಸಂಬಂಧಿಕರು, ಖಾಸಗಿ ನಿವಾಸಿಗಳು (ಪಿಆರ್) ನಮೂದಿಸಿರುವ ವಿವರಗಳು ತಪ್ಪಾಗಿರುವುದು ಕಂಡುಬಂದಲ್ಲಿ ಆಕ್ಷೇಪಣೆಗಳನ್ನು ಬೆಳೆ ದರ್ಶಕ ಮೊಬೈಲ್ ಆ್ಯಪ್ನಲ್ಲಿ ಸಲ್ಲಿಸಲು ಅವಕಾಶ ಅವಕಾಶ ಕಲ್ಪಿಸಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
‘ರೈತರು ಅಥವಾ ಪರವಾಗಿ ಕುಟುಂಬದವರು ಸ್ಮಾರ್ಟ್ ಫೋನ್ನಲ್ಲಿ ಬೆಳೆ ದರ್ಶಕ ಆ್ಯಪ್ ಅನ್ನು ಗೂಗಲ್ನ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ, ತಮ್ಮ ಜಮೀನಿನ ಬೆಳೆಗಳ ಮಾಹಿತಿ ದಾಖಲಾಗಿರುವುದನ್ನು ಛಾಯಾಚಿತ್ರ ಸಮೇತ ವೀಕ್ಷಿಸಬಹುದು. ಜೊತೆಗೆ ಬೆಳೆ, ಸರ್ವೆ ನಂಬರ್, ವಿಸ್ತೀರ್ಣ, ಬೆಳೆ ಸಮೀಕ್ಷೆ ಮಾಡಿದವರ ವಿವರಗಳ ಬಗ್ಗೆ ಏನಾದರೂ ಆಕ್ಷೇಪಣೆ ಇದ್ದರೆ ಅತ್ಯಂತ ಸುಲಭವಾಗಿ ಸಲ್ಲಿಸಬಹುದು’ ಎಂದು ಮಾಹಿತಿ ನೀಡಿದ್ದಾರೆ.
‘ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಲು ನ.16ರವರೆಗೆ ಕಾಲಾವಕಾಶ ನೀಡಲಾಗಿದೆ. ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ವಿಮೆ ಹಾಗೂ ಹಾನಿ ಪರಿಹಾರ ನೀಡುವಾಗ ಪರಿಗಣಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂ.ಎಸ್.ಪಿ) ಹಾಗೂ ಇತರ ಸರ್ಕಾರದ ಸಹಾಯಧನ ನೀಡುವ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.