ADVERTISEMENT

ಚಿನ್ನಾಭರಣಕ್ಕಾಗಿ ಕೊಲೆ ಆರೋಪ: ವ್ಯಕ್ತಿ ಬಂಧನ

ಕೃಷ್ಣಾ ನದಿಯಲ್ಲಿ ಶವ ಪತ್ತೆಯಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 15:14 IST
Last Updated 13 ಅಕ್ಟೋಬರ್ 2020, 15:14 IST

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ.

ಅ. 5ರಂದು ನದಿಯಲ್ಲಿ ತೇಲಿ ಬಂದ ವ್ಯಕ್ತಿಯ ಮೃತ ದೇಹದೊಂದಿಗಿದ್ದ ಬ್ಯಾಗ್‌ನಲ್ಲಿ 1 ಕೆ.ಜಿ. 49 ಗ್ರಾಂ. ಬಂಗಾರದ ಗಟ್ಟಿ ಪತ್ತೆಯಾಗಿತ್ತು. ಮೃತರನ್ನು ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಮೀರಜ್‌ ತಾಲ್ಲೂಕಿನ ಪಾಟಗಾಂವ ಗ್ರಾಮದ ಸಾಗರ ಪಾಟೀಲ (30) ಎಂದು ಅಥಣಿ ಠಾಣೆ ಪೊಲೀಸರು ಗುರುತಿಸಿದ್ದರು. ‘ಪತಿಯ ಬಳಿ ಇದ್ದ ಚಿನ್ನದ ಗಟ್ಟಿಯ ಆಸೆಗಾಗಿ ಕೊಂದು ಶವವನ್ನು ಕೃಷ್ಣಾ ನದಿಗೆ ಎಸೆದಿರಬಹುದು ಹಾಗೂ ಈ ವಿಷಯದಲ್ಲಿ ಅವರೊಂದಿಗೆ ಇದ್ದ ಅಥಣಿ ತಾಲ್ಲೂಕು ಜಂಬಗಿಯ ನವನಾಥ ಬಾಬರ ಎನ್ನುವವರ ಮೇಲೆ ಅನುಮಾನವಿದೆ. ಸೆ.29ರಂದು ಪತಿಯು ನವನಾಥನೊಂದಿಗೆ ಇದ್ದ ಮಾಹಿತಿ ಇತ್ತು’ ಎಂದು ಪತ್ನಿ ಪ್ರಗತಿ ಪಾಟೀಲ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಮಹಾರಾಷ್ಟ್ರದ ಅರಗದಲ್ಲಿ ಸೋಮವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ‘ಪ್ರಕರಣದಲ್ಲಿ ಮೃತದೇಹದೊಂದಿಗಿದ್ದ ಬ್ಯಾಗ್‌ನಲ್ಲಿದ್ದ ₹ 75 ಲಕ್ಷ ಮೌಲ್ಯದ 1 ಕೆ.ಜಿ. 49 ಗ್ರಾಂ., ಆರೋಪಿ ನವನಾಥ ಬಳಿಯಿಂದ ₹ 2 ಲಕ್ಷ ಮೌಲ್ಯದ 3 ಕೆ.ಜಿ. 638 ಗ್ರಾಂ. ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಅಥಣಿ ಡಿಎಸ್ಪಿ ಎಸ್.ಇ. ಗಿರೀಶ ಹಾಗೂ ಸಿಪಿಐ ಶಂಕರಗೌಡ ಬಸನಗೌಡರ ಮಾರ್ಗದರ್ಶನದಲ್ಲಿ ಪಿಎಸ್‌ಐ ಕುಮಾರ ಹಾಡಕರ, ಎಂ.ಡಿ. ಘೋರಿ ಮತ್ತು ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.