ಮೂಡಲಗಿ: ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಈರುಳ್ಳಿ, ಸೋಯಾಬಿನ್ ಮತ್ತು ಗೋವಿನಜೋಳ ಬೆಳೆ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ ಯಾದವಾಡ ಭಾಗದಲ್ಲಿ ಕೊಯ್ಲಿಗೆ ಬಂದಿದ್ದ ಈರುಳ್ಳಿ ಬೆಳೆಯು ಸತತ ಮಳೆಯಿಂದಾಗಿ ಭೂಮಿಯಲ್ಲಿ ನೀರು ಮಡುಗಟ್ಟಿ ಸಂಪೂರ್ಣ ನಾಶವಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಯಾದವಾಡ ಸುತ್ತಮುತ್ತಲಿನ ರೈತರು ಈರುಳ್ಳಿ ಬೆಳೆಯನ್ನು ನೆಚ್ಚಿಕೊಂಡಿದ್ದು, ಈ ವರ್ಷ 300 ಎಕರೆಗೂ ಹೆಚ್ಚು ಭೂಮಿಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ಈ ಪೈಕಿ ಅರ್ಧದಷ್ಟು ರೈತರು ಈರುಳ್ಳಿ ಕಟಾವು ಮಾಡಿದ್ದು, ಇನ್ನು ಅರ್ಧದಷ್ಟು ರೈತರು ಕೊಯ್ಲು ಮಾಡಬೇಕಾಗಿದೆ.
‘ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯ ಪರಿಣಾಮದಿಂದ ಕೊಯ್ಲು ಆಗಿರುವ ಮತ್ತು ಕೊಯ್ಲು ಆಗಬೇಕಾಗಿರುವ ಎರಡೂ ಈರುಳ್ಳಿ ಬೆಳೆಯು ಕೊಳೆತು ಸಂಪೂರ್ಣ ನಷ್ಟವಾಗಿದೆ’ ಎಂದು ಯಾದವಾಡದ ಈರುಳ್ಳಿ ಬೆಳೆದ ಯುವ ರೈತ ಜಗದೀಶ ರಡರಟ್ಟಿ ತಮ್ಮ ಅಳಲು ತೋಡಿಕೊಂಡರು.
‘ಈರುಳ್ಳಿ ಬೆಳೆಗೆ ಎಕರೆಗೆ ₹30ರಿಂದ ₹40 ಸಾವಿರ ಖರ್ಚು ತಗಲುತ್ತದೆ. ಎಲ್ಲವೂ ಸರಿಯಾಗಿದ್ದುಕೊಂಡು ಕೈಗೆ ಬೆಳೆ ಬಂದರೆ ಎಕರೆಗೆ 60ರಿಂದ 70 ಕ್ವಿಂಟಲ್ ಇಳುವರಿ ಬರುತ್ತದೆ. ಉತ್ತಮ ದರ ಸಿಕ್ಕರೆ ಅಂದಾಜು ಎಕರೆಗೆ ₹2ಲಕ್ಷದಿಂದ ₹3 ಲಕ್ಷ ಲಾಭ ನಿಶ್ಚಿತ. ಆದರೆ ಹಸ್ತ ಮಳೆಯಿಂದಾಗಿ ಈರುಳ್ಳಿಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ಈರುಳ್ಳಿ ಬೆಳೆದ ಹಲವು ರೈತರು ತಮ್ಮ ಕಷ್ಟ ತೋಡಿಕೊಂಡರು.
ಸೋಯಾಬಿನ್, ಗೋವಿನ ಜೋಳ ನಷ್ಟ: ಸತತ ಮಳೆಯಿಂದಾಗಿ ಸೋಯಾಬಿನ್ ಮತ್ತು ಗೋವಿನ ಜೋಳ ಮತ್ತು ತರಕಾರಿ ಹಾನಿಯಾಗಿದೆ. ಸೋಯಾಬಿನ್ ಮತ್ತು ಗೋವಿನಜೋಳ ಎರಡೂ ಬೆಳೆಗಳು ಕಟಾವಿಗೆ ಬಂದಿವೆ. ಕೆಲವು ರೈತರು ಕಟಾವು ಮಾಡಿದ್ದರೆ, ಇನ್ನೂ ಕೆಲ ರೈತರು ಕಟಾವಿಗೆ ಸಿದ್ಧತೆಯಲ್ಲಿರುವಾಗ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
’ಪ್ರಸಕ್ತ ಹಂಗಾಮಿನಲ್ಲಿ ಮೂಡಲಗಿ ತಾಲ್ಲೂಕಿನಲ್ಲಿ ಅಂದಾಜು 7 ಸಾವಿರ ಹೆಕ್ಟೇರ್ ಗೋವಿನಜೋಳ ಮತ್ತು 450 ಹೆಕ್ಟೇರ್ ಸೋಯಾಬಿನ್ ಬೆಳೆದಿರುವ ಬಗ್ಗೆ ಕೃಷಿ ಇಲಾಖೆ ಮಾಹಿತಿ ನೀಡಿದೆ. ಕಬ್ಬಿನೊಂದಿಗೆ ಪರ್ಯಾಯ ಬೆಳೆಯಾಗಿ ಬೆಳೆಯುವ ರೈತರು ಮತ್ತು ಗೋವಿನ ಜೋಳವನ್ನು ನೆಚ್ಚಿಕೊಂಡಿರುವ ಸಣ್ಣ ರೈತರಿಗೆ ಮಳೆಯ ಬರೆ ನುಂಗಲಾರದ ತುತ್ತಾಗಿದೆ. ಮಳೆಯಿಂದಾಗಿ ಗೋವಿನ ಜೋಳದ ದಂಟು ಹಾಳಾಗಿ ಕಣಕಿ ಮೇವು ಸಹ ದೊರೆಯದೆ ಜಾನುವಾರುಗಳಿಗೆ ಮೇವಿನ ತೊಂದರೆಯಾಗಲಿದೆ’ ಎಂದು ಮೂಡಲಗಿ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಗದಾಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕ್ಯಾಬಿಜ್, ಹೂಕೋಸು, ಕೋತ್ತಂಬರಿ ಬೆಳೆಗಳು ನೀರಿನಲ್ಲಿ ನಿಂತು ಹಾನಿಯಾಗಿವೆ.
ಕಬ್ಬು, ಅರಿಷಿಣಕ್ಕೆ ಬಾಧೆ ಇಲ್ಲ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಕಬ್ಬು ಮತ್ತು ಅರಿಷಿಣಕ್ಕೆ ಆತಂಕವಿಲ್ಲ. ಮಳೆ ಹೀಗೇಯೇ ಮುಂದುವರಿದರೆ ಅರಿಷಣ ಬೆಳೆಯೂ ಹಾನಿಯಾಗುವ ಸಂಭವವಿದ್ದು, ಕೊಳೆರೋಗ ಬಾಧಿಸಬಹುದಾಗಿದೆ.
ಸತತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಆಗಿರುವ ನಷ್ಟವನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕುಅಶೋಕ ಗದಾಡಿ ಅಧ್ಯಕ್ಷರು ಮೂಡಲಗಿ ತಾಲ್ಲೂಕು ಕೃಷಿಕ ಸಮಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.