ಬೆಳಗಾವಿ: ‘ಷೇರ್ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಮಾಡಿ ಕೊಡುವುದಾಗಿ ನಂಬಿಸಿದ ತಂಡವೊಂದು, ನಿಪ್ಪಾಣಿ ತಾಲ್ಲೂಕಿನ ಗ್ರಾಮದ ವ್ಯಕ್ತಿಯಿಂದ ₹73.22 ಲಕ್ಷ ಕಬಳಿಸಿದೆ.
ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಗ್ರಾಮದ ಶಿವರಾಜ ಕೆರಗುಟೆ ಹಣ ಕಳೆದುಕೊಂಡವರು. ಶಿವರಾಜ ಅವರು ನಿಪ್ಪಾಣಿ ಹಾಗೂ ಖಡಕಲಾಟ ಗ್ರಾಮದಲ್ಲಿ ವಿವಿಧ ಮೂರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಫೇಸ್ಬುಕ್ನಲ್ಲಿ ಬಂದ ಷೇರ್ ಮಾರ್ಕೆಟ್ ಹೂಡಿಕೆದಾರರ ಲಿಂಕ್ ಅನುಸರಿಸಿ, ಮೋಸದ ಬಲೆಗೆ ಸಿಕ್ಕಿಕೊಂಡಿದ್ದಾರೆ. ಲಿಂಕ್ ಮೂಲಕ ಷೇರ್ ಮಾರ್ಕೆಟ್ನ ಪರಿಣತರ ಗ್ರೂಪ್ ಎಂದು ಹೇಳಲಾದ ವಾಟ್ಸ್ಆ್ಯಪ್ ಗ್ರೂಪ್ ಸೇರಿದ್ದಾರೆ.
ವಿವಿಧ ಸ್ಟಾಕ್ಗಳನ್ನು ತೋರಿಸಿದ ಕಳ್ಳರು ಒಂದೇ ದಿನದಲ್ಲಿ ಶೇ 10ರಷ್ಟು ಹೆಚ್ಚು ಹಣ ವಾಪಸ್ ಆಗಲಿದೆ ಎಂದು ನಂಬಿಸಿದ್ದಾರೆ. ಶಿವರಾಜ ಹೆಸರಲ್ಲಿ ಎರಡು ಆನ್ಲೈನ್ ಪ್ರೊಫೈಪ್ಗಳನ್ನು ಸಿದ್ಧಪಡಿಸಿದ್ದಾರೆ. ಇದನ್ನು ನಂಬಿದ ಶಿವರಾಜ ಅವರು ಮೊದಲ ಎರಡು ಬಾರಿ ಸಣ್ಣ ಮೊತ್ತದ ಷೇರ್ ಖರೀದಿಸಿದ್ದಾರೆ. ವಿತ್ಡ್ರಾ ಮಾಡಿದಾಗ ಒಂದೇ ದಿನದಲ್ಲಿ ಶೇ 10ರಷ್ಟು ಹೆಚ್ಚುನ ಹಣ ಅವರಿಗೆ ವಾಪಸ್ ಸಿಕ್ಕಿದೆ.
ಇದರಿಂದ ಮೋಸ ಹೋದ ಅವರು ಜ.18ರಿಂದ ಫೆ.1ರವರೆಗೆ ಒಟ್ಟು ₹75.20 ಲಕ್ಷ ಹಣ ತೊಡಗಿಸಿದ್ದಾರೆ. ಇದರಲ್ಲಿ ಎರಡು ಬಾರಿ ವಿತ್ಡ್ರಾ ಮಾಡಿದಾಗ ₹1.97 ಲಕ್ಷ ಮರಳಿ ಬಂದಿದೆ. ಉಳಿದ ₹73.22 ಲಕ್ಷದಷ್ಟು ಹಣವನ್ನು ಲಪಟಾಯಿಸಲಾಗಿದೆ.
ಎರಡು ವಾರ ಕಾದು ನೋಡಿದ ವ್ಯಕ್ತಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.