ಬೆಳಗಾವಿ: ಜೀವಂತ ಗೂಬೆ ಹಾಗೂ ವಿವಿಧ ವನ್ಯಜೀವಿ ಪರಿಕರಗಳನ್ನು ಮಾರುವ ಜಾಲವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಇಲ್ಲಿನ ಅರಣ್ಯ ಸಂಚಾರ (ಜಾಗೃತ) ದಳದವರು, ಐವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.
ಖಡಕಲಾಟದ ಸೂರಜ ವಡ್ಡರ, ಸದಲಗಾದ ಅರುಣ ಕೊರವಿ, ಸಂದೀಪ ಕೊರವಿ, ಮಹಾರಾಷ್ಟ್ರದ ಸಾಂಗಾಂವದ ಶುಭಂ ಕಾಂಬಳೆ ಮತ್ತು ಕಾರದಗಾದ ಮಯೂರ ಕಾಂಬಳೆ ಬಂಧಿತರು. ಚಿಕ್ಕೋಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ಅವರಿಂದ ಒಂದು ಜೀವಂತ ಗೂಬೆ (ಇಂಡಿಯಲ್ ಈಗಲ್ ಔಲ್) ಹಾಗೂ ಮೂರು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
‘ಬಂಧಿತ ಆರೋಪಿಗಳು ಈ ಗೂಬೆಯನ್ನು ಮೂಢನಂಬಿಕೆಯ ಉದ್ದೇಶಕ್ಕೆ ಬಳಸುವುದಕ್ಕಾಗಿ ₹ 30 ಲಕ್ಷ ವ್ಯವಹಾರ ನಡೆಸುವ ಸಮಯದಲ್ಲಿ ದಾಳಿ ನಡೆಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕೆ. ಕಲ್ಲೋಳಿಕರ ತಿಳಿಸಿದ್ದಾರೆ.
‘ಮಹಾರಾಷ್ಟ್ರದ ಗಡಿಯಲ್ಲಿರುವ ನಿಪ್ಪಾಣಿ, ಚಿಕ್ಕೋಡಿ, ಸಂಕೇಶ್ವರ ಸಮೀಪದ ಗ್ರಾಮಗಳಲ್ಲಿ ಗೂಬೆ ಹಾಗೂ ಇನ್ನಿತರ ವನ್ಯಜೀವಿ ಪರಿಕರಗಳನ್ನು ಅವ್ಯಾಹತವಾಗಿ ಅಕ್ರಮವಾಗಿ ಮಾರುವ ಜಾಲ ಬಹುದಿನಗಳಿಂದ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ. ಈಗ ದಳವು ದಾಖಲಿಸಿರುವ ಪ್ರಕರಣ ಇಲ್ಲಿ ಇದೇ ಮೊದಲನೆಯದಾಗಿದೆ. ಕೆಲವೇ ದಿನಗಳಲ್ಲಿ ಇಡೀ ಜಾಲವನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಜಾಗೃತ ದಳದ ಮುಖ್ಯಸ್ಥರೂ ಆಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಗರ್ಗ್ ಹಾಗೂ ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ಅವರ ಮಾರ್ಗದರ್ಶನದಲ್ಲಿ ಜಾಗೃತ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕೆ. ಕಲ್ಲೋಳಿಕರ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಡಿ. ಹುದ್ದಾರ, ವಲಯ ಅರಣ್ಯಾಧಿಕಾರಿ ಬಿ.ವಿ. ಉಳವಣ್ಣವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸುರೇಶ ನಾಯ್ಕ, ಆರ್.ಜಿ. ಹಣಜಿ, ರಾಕೇಶ ಮುರಾರಿ ಹಾಗೂ ಅರಣ್ಯ ರಕ್ಷಕರಾದ ಗಿರೀಶ ಬಣ್ಣದ, ಎಸ್.ಎ. ಜಕಾತಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.