ADVERTISEMENT

ರಕ್ತ ದಾನ ಮಾಡಿ ಪಂಚಮಸಾಲಿ ಶ್ರೀ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 13:24 IST
Last Updated 23 ಡಿಸೆಂಬರ್ 2021, 13:24 IST
ರಕ್ತ ದಾನ ಮಾಡಿ ಪಂಚಮಸಾಲಿ ಶ್ರೀ ಹುಟ್ಟುಹಬ್ಬ ಆಚರಣೆ
ರಕ್ತ ದಾನ ಮಾಡಿ ಪಂಚಮಸಾಲಿ ಶ್ರೀ ಹುಟ್ಟುಹಬ್ಬ ಆಚರಣೆ   

ಬೆಳಗಾವಿ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಹುಟ್ಟು ಹಬ್ಬವನ್ನು ಇಲ್ಲಿ ರಕ್ತ ದಾನ ಮಾಡುವ ಮೂಲಕ ಗುರುವಾರ ಆಚರಿಸಿಕೊಂಡರು.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಸರ್ಕಾರದ ಗಮನಸೆಳೆಯುವುದಕ್ಕೆ ನಡೆದ ‘ರಕ್ತ ದಾಸೋಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಸಿಗೆ ನೀರೆರೆದರು.

ADVERTISEMENT

ಬಳಿಕ ಮಾತನಾಡಿ, ‘ರೈತರ ದಿನ ಮತ್ತು ನನ್ನ ಜನ್ಮ ದಿನದ ಅಂಗವಾಗಿ ಸಮಾಜದವರು ರಾಜ್ಯದಾದ್ಯಂತ ಶಿಬಿರ ಆಯೋಜಿಸಿ ರಕ್ತದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ಸಂಕಷ್ಟ ಮತ್ತು ಸಿಡಿಎಸ್ ಬಿಪಿನ್‌ ರಾವತ್‌ ದುರ್ಮರಣ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಜ.14ರಂದು ಕೂಡಲಸಂಗಮದಲ್ಲಿ, ಮೀಸಲಾತಿಗೆ ಆಗ್ರಹಿಸಿ ನಡೆದ ಪಾದಯಾತ್ರೆಯ ವರ್ಷಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮತ್ತು ಸಂವಾದವನ್ನು ಮತ್ತೊಮ್ಮೆ ನಡೆಸಲಾಗುವುದು. ರಾಷ್ಟ್ರೀಯ ಬಸವ ಬಸವ ಕೃಷಿ ಪ್ರಶಸ್ತಿ ಕಾರ್ಯಕ್ರಮವೂ ಅಂದು ನಡೆಯಲಿದೆ’ ಎಂದರು.

‘ಸುವರ್ಣ ವಿಧಾನಸೌಧ ಆವರಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸುವುದಾಗಿ ಮುಖ್ಯಮಂತ್ರಿ ಘೋಷಿಸಿರುವುದು ಖುಷಿ ತಂದಿದೆ. ಜತೆಗೆ ವಿಶ್ವಗುರು ಬಸವೇಶ್ವರರ ಪ್ರತಿಮೆಯನ್ನೂ ಅಲ್ಲಿ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.

ಲಿಂಗಾಯತ ಪಂಚಮಸಾಲಿ ಸಮಾಜದ ಯುವ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಣ್ಣ ಚಂದರಗಿ ಮಾತನಾಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶ್ರೀಗಳಿಗೆ ಶುಭ ಹಾರೈಸಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಪಾಟೀಲ, ನಗರ ಘಟಕದ ಅಧ್ಯಕ್ಷ ರಾಜು ಮಗದುಮ್ಮ, ಮುಖಂಡರಾದ ನಿಂಗಪ್ಪ ಪಿರೋಜಿ, ರಾಮನಗೌಡ ಪಾಟೀಲ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.