ಚಿಕ್ಕೋಡಿ: ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಬುಧವಾರ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಶ್ರೀಮಂತ ಬಂಡು ಕೋಳಿ (65) ಅವರು ಮೃತಪಟ್ಟರು.
ಶ್ರೀಮಂತ ಕೋಳಿ ಅವರು ‘ಪ್ರಜಾವಾಣಿ’ಯ ಚಿಕ್ಕೋಡಿ ವರದಿಗಾರ ಸುಧಾಕರ ಅವರ ತಂದೆ. ಶ್ರೀಮಂತ ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ಎಂದಿನಂತೆ ಶ್ರೀಮಂತ ಅವರು ತಮ್ಮ ಹೊಲಕ್ಕೆ ನಡೆದುಕೊಂಡು ಹೊರಟಿದ್ದರು. ರಸ್ತೆ ಬದಿಯಲ್ಲಿ ಹೋಗುವಾಗ ಇಬ್ಬರು ಯುವಕರು ಬೈಕ್ ಮೇಲೆ ವೇಗವಾಗಿ ಬಂದು ಡಿಕ್ಕಿ ಹೊಡೆಸಿದರು. ಇದರಿಂದ ಶ್ರೀಮಂತ ಅವರ ತಲೆ, ಮುಖ ಹಾಗೂ ಮೈಮೇಲೆ ತೀವ್ರ ಸ್ವರೂಪದ ಗಾಯಗಳಾದವು. ರಕ್ತಸ್ರಾವದಿಂದ ಅವರು ನಿತ್ರಾಣವಾದರು.
ಅಪಘಾತಪಡಿಸಿದ ಯುವಕರು ಬೈಕ್ ಮೇಲೆಯೇ ಅವರನ್ನು ಚಿಕ್ಕೋಡಿಯ ಆಸ್ಪತ್ರೆಗೆ ಕರೆತರಲು ಯತ್ನಿಸಿದರು. ಅದು ಸಾಧ್ಯವಾಗದ ಕಾರಣ ಆರೋಗ್ಯ ಕವಚ (108) ಸಂಖ್ಯೆಗೆ ಕರೆ ಮಾಡಿದರು. ಆಂಬುಲೆನ್ಸ್ ಸ್ಥಳಕ್ಕೆ ಬಂದು ಅವರನ್ನು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು.
ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದ ಶ್ರೀಮಂತ ಅವರು, ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.