ಬೆಳಗಾವಿ: ಇಲ್ಲಿನ ಮಜಗಾಂವ, ಉದ್ಯಮಬಾಗ ಪ್ರದೇಶದಲ್ಲಿ ಜನರಿಗೆ ಮಟ್ಕಾ ಜೂಜಾಟಕ್ಕೆ ಪ್ರೇರಣೆ ನೀಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು 6 ತಿಂಗಳ ಅವಧಿಗೆ ಗಡಿಪಾರು ಮಾಡಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯೂ ಆಗಿರುವ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಡಾ.ವಿಕ್ರಂ ಅಮಟೆ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಮಜಗಾಂವ ರಾಯಣ್ಣನಗರದ ಅಬ್ದುಲಮುನಾಫ ಮೈನುದ್ದೀನ ತಿಗಡಿ ಗಡಿಪಾರಾದವರು.
‘ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಾರ್ವಜನಿಕ ನೆಮ್ಮದಿ ಮತ್ತು ಶಾಂತಿ ಸುವ್ಯವಸ್ಥೆ ಭಂಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಾವೇರಿಗೆ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಅವರ ಮೇಲೆ 2011ರಿಂದ ಇಲ್ಲಿವರೆಗೆ 11 ಪ್ರಕರಣಗಳು ದಾಖಲಾಗಿ, ಎಲ್ಲ ನ್ಯಾಯಾಲಯಗಳಲ್ಲೂ ಶಿಕ್ಷೆಯಾಗಿದ್ದರೂ ಜೂಜಾಟ ಆಡಿಸುವುದನ್ನು ಮುಂದುವರಿಸಿದ್ದರು. ಹೀಗಾಗಿ, ಕಠಿಣ ಕ್ರಮ ಜರುಗಿಸಲಾಗಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.
‘ಆರೋಪಿಯು, ಆ ಭಾಗದಲ್ಲಿ ವಾಸಿಸುವ ಬಡ ಜನರಿಗೆ ಕುಳಿತಲ್ಲೇ ಹೆಚ್ಚು ಶ್ರಮವಿಲ್ಲದೆ ಹಣ ಗಳಿಸಬಹುದೆಂದು ಪ್ರೇರೇಪಿಸಿ, ಆ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡುತ್ತಿದ್ದ’ ಎಂದು ಹೇಳಿದ್ದಾರೆ.
‘ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಮಾಜಘಾತುಕರ ಮೇಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.