ಬೆಳಗಾವಿ: ನಗರದ 39 ಕೇಂದ್ರಗಳಲ್ಲಿ ಭಾನುವಾರ ನಡೆದ ಎಸ್.ಆರ್.ಪಿ.ಸಿ, ಐ.ಆರ್.ಪಿ.ಸಿ ಹಾಗೂ ಕೆ.ಎಸ್.ಆರ್.ಪಿ. ಪುರುಷ ಮತ್ತು ಮಹಿಳಾ ಕಾನ್ಸ್ಟೆಬಲ್ ಹುದ್ದೆಗಳಿಗಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿ, ನಾಲ್ವರು ನಕಲಿ ಅಭ್ಯರ್ಥಿಗಳನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉದ್ಯಮಬಾಗದ ಜಿಐಟಿ ಕಾಲೇಜು, ಮಾಳಮಾರುತಿಯ ಲವ್ ಡೇಲ್ ಸೆಂಟ್ರಲ್ ಸ್ಕೂಲ್, ಟಿಳಕವಾಡಿಯಲ್ಲಿನ ಕೆ.ಎಲ್.ಎಸ್ ಇಂಗ್ಲಿಷ್ ಶಾಲೆ ಹಾಗೂ ಶಹಾಪುರದಲ್ಲಿನ ಸರ್ಕಾರಿ ಚಿಂತಾಮಣ್ ರಾವ್ ಪದವಿಪೂರ್ವ ಕಾಲೇಜಿನಲ್ಲಿ ಈ ನಾಲ್ವರು ಅಭ್ಯರ್ಥಿಗಳು ಮೂಲ ಅಭ್ಯರ್ಥಿಗಳ ಪರವಾಗಿ ಕಾನೂನು ಬಾಹಿರವಾಗಿ ಪರೀಕ್ಷೆ ಬರೆಯುತ್ತಿದ್ದರು.
ಆರೋಪಿಗಳನ್ನು ಗೋಕಾಕ ತಾಲ್ಲೂಕು ಹಡಗಿನಾಳದ ಭೀಮಶಿ ಹುಲ್ಲೋಳಿ (24), ಬೆಣಚಿನಮರಡಿಯ ಸುರೇಶ ಕಡಬಿ (25), ಉದಗಟ್ಟಿಯ ಆನಂದ ಒಡೆಯರ (28) ಮತ್ತು ಮೆಹಬೂಬ್ ಅಕ್ಕಿವಾಟ (23) ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಉದ್ಯಮಬಾಗ್, ಮಾಳಮಾರುತಿ, ಟಿಳಕವಾಡಿ ಮತ್ತು ಶಹಾಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ವಿಕ್ರ ಅಮಟೆ ತಿಳಿಸಿದ್ದಾರೆ.
ಪರೀಕ್ಷೆಗೆ ನೋಂದಾಯಿಸಿದ್ದ 11,921 ಅಭ್ಯರ್ಥಿಗಳ ಪೈಕಿ 8,461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ನಡೆದಿದ್ದ ಪೊಲೀಸ್ ಕಾನ್ ಸ್ಟೆಬಲ್ ಪರೀಕ್ಷೆಯಲ್ಲೂ ಕೆಲವರು ಇದೇ ರೀತಿ ಅಕ್ರಮ ಎಸಗಿ ಸಿಕ್ಕಿಬಿದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.