ADVERTISEMENT

26 ರೌಡಿಗಳ ಮನೆ ಮೇಲೆ ದಾಳಿ: ಮೂವರು ಆರೋಪಿಗಳು, ಮಾರಕಾಸ್ತ್ರ ವಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 4:22 IST
Last Updated 29 ಜೂನ್ 2022, 4:22 IST

ಬೆಳಗಾವಿ:ನಗರದ ವಿವಿಧೆಡೆ ಅಪರಾಧ ಚಟುವಟಿಕೆಗಳಿಗೆ ಹೊಂಚು ಹಾಕಿದ್ದ 26 ರೌಡಿಗಳ ಮನೆಗಳ ಮೇಲೆ ಬುಧವಾರ ಬೆಳ್ಳಂಬೆಳಿಗ್ಗೆ ದಾಳಿ ಮಾಡಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು, ಹಲವು ಮಾರಕಾಸ್ತ್ರ ಹಾಗೂ ದರೋಡೆಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ150ಕ್ಕೂ ಹೆಚ್ಚು ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿತು.

ನಗರದ ವಿವಿಧ ಕಡೆಗಳಲ್ಲಿ ನಿರಾಳವಾಗಿ ಓಡಾಡುತ್ತಿದ್ದ ರೌಡಿಗಳಿಗೆ ಬಿಸಿ ಮುಟ್ಟಿಸಲು, ಅವರ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ತಲವಾರ, ಚಾಕು, ಜಂಬೆ ಸೇರಿದಂತೆ ಇತರೆ ಮಾರಕಾಸ್ತ್ರಗಳು ಸಿಕ್ಕಿವೆ.

ADVERTISEMENT

ರುಕ್ಮಿಣಿ ನಗರದ ಶ್ರೀಧರ ಸತ್ಯಪ್ಪ ತಲವಾರ (29), ಮಧ್ವರೋಡಿನ ವಿನಯ ಶಂಕರ ಪ್ರಧಾನ (45) ಹಾಗೂ ಖಂಜರ ಗಲ್ಲಿಯ ಅಲ್ತಾಫ ಸುಬೇದಾರ (36) ಅವರನ್ನು ಮಾರಕಾಸ್ತ್ರ ಸಂಗ್ರಹಿಸಿದ ಆರೋಪದಡೆ ವಶಕ್ಕೆ ಪಡೆಯಲಾಗಿದೆ.

ಎಲ್ಲ 26 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವಿಷಯ ತಿಳಿದು ಹಲವರು ಮನೆಯಿಂದ ಪರಾರಿಯಾಗಿ ತಲೆಮರೆಸಿಕೊಂಡರು.

ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈ ದಾಳಿ ನಡೆಸಲಾಗಿದೆ.‌ ಸಮಾಜದಲ್ಲಿ ಶಾಂತಿ ಭಂಗ ಮಾಡುವವರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.