ADVERTISEMENT

ಅಂಚೆ ಕಚೇರಿ | ವಾರಸುದಾರರಿಲ್ಲದ ₹25,480 ಕೋಟಿ ಠೇವಣಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 14:20 IST
Last Updated 4 ಫೆಬ್ರುವರಿ 2024, 14:20 IST
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ   

ಮೂಡಲಗಿ: ದೇಶದಲ್ಲಿ ಪ್ರಸ್ತುತ ಅಂಚೆ ಕಚೇರಿಯಲ್ಲಿ ನಿಷ್ಕ್ರಿಯ ಖಾತೆಗಳು ಮತ್ತು ವಾರಸುದಾರರಿಲ್ಲದ ಸುಮಾರು ₹ 25,480 ಕೋಟಿ ಮೊತ್ತದ ಠೇವಣಿ ಇದ್ದು, ಇಲಾಖೆ ವತಿಯಿಂದ ಈಗಾಗಲೇ ಅರ್ಹ ವಾರಸುದಾರರನ್ನು ಗುರುತಿಸಿ ಮಾರ್ಚ್‌ 2023 ರಲ್ಲಿ 21 ಲಕ್ಷ ಖಾತೆದಾರರಿಗೆ ₹ 1240 ಕೋಟಿ ಹಣ ಜಮಾ ಮಾಡಲಾಗಿದೆ. ಡಿಸೆಂಬರ್ 2023ರಲ್ಲಿ 33.35 ಲಕ್ಷ ಖಾತೆಗಳಿಗೆ ₹ 1319.67 ಕೋಟಿ ಜಮಾ ಮಾಡಲಾಗಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿಂಹ ಚೌಹಾಣ ಅವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ರಾಜ್ಯಸಭೆಯ ಬಜೆಟ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ದೇಶದಾದ್ಯಂತ ಅಂಚೆ ಕಚೇರಿಗಳ ಸಂಖ್ಯೆ, ಈ ಅಂಚೆ ಕಚೇರಿಗಳಲ್ಲಿಯ ಒಟ್ಟು ಉಳಿತಾಯ ಖಾತೆಗಳ ಸಂಖ್ಯೆ ಹಾಗೂ ನಿಷ್ಕ್ರಿಯ ಖಾತೆಗಳಲ್ಲಿಯ ಠೇವಣಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯ ಅಂಚೆ ಕಚೇರಿಗಳು, ಉಪ ಅಂಚೆ ಕಚೇರಿಗಳು ಮತ್ತು ಶಾಖಾ ಅಂಚೆ ಕಚೇರಿಗಳು ಸೇರಿ ಒಟ್ಟು 1,49,478 ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಒಟ್ಟು 7.52 ಕೋಟಿ ಖಾತೆಗಳನ್ನು ಹೊಂದಿದೆ. ರಾಜ್ಯದಲ್ಲಿ 9658 ಅಂಚೆ ಕಚೇರಿಗಳಿದ್ದು 78.11 ಲಕ್ಷ ಖಾತೆಗಳನ್ನು ಹೊಂದಿದೆ ಎಂದರು.

ದೇಶದಾದ್ಯಂತ ಎಲ್ಲ ಅಂಚೆ ಕಚೇರಿಗಳನ್ನು ಗಣಕೀಕರಣಗೊಳಿಸಲಾಗಿದೆ. ಉಳಿತಾಯ ಖಾತೆದಾರರಿಗೆ ಎಟಿಎಂ, ಚೆಕ್‌ಬುಕ್‌, ಇಂಟರ್‌ನೆಟ್‌ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಇ-ಪಾಸ್ಬುಕ್, ಇ.ಎಫ್.ಟಿ ಮತ್ತು ಆರ್.ಟಿ.ಜಿ.ಎಸ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಗ್ರಾಮೀಣ ಡಾಕ್ ಸೇವಕರಿಗೆ ₹10 ಸಾವಿರದಿಂದ ₹35 ಸಾವಿರ ಡಿಎ ಭತ್ಯೆ, ಪಿಂಚಣಿ ಮತ್ತು ಆರೋಗ್ಯ ಸೇರಿದಂತೆ ಇತರ ಸೌಲಭ್ಯಗಳನ್ನು ಇಲಾಖೆಯಿಂದ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.