ADVERTISEMENT

ಅಫ್ಗಾನಿಸ್ತಾನ ಮುಸ್ಲಿಮರು ದೇಶಕ್ಕೆ ನುಸುಳುವ ಸಾಧ್ಯತೆ ಇದೆ: ಪ್ರಮೋದ್ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 16:30 IST
Last Updated 18 ಆಗಸ್ಟ್ 2021, 16:30 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಬೆಳಗಾವಿ: ‘ಅಫ್ಗಾನಿಸ್ತಾನದಲ್ಲಿ ಸಂಘರ್ಷಭರಿತ ಪರಿಸ್ಥಿತಿ ಮುಂದುವರಿದಿರುವುದರಿಂದಾಗಿ ಅಲ್ಲಿನ ಮುಸ್ಲಿಮರು ಭಾರತೀಯರ ಹೆಸರಿನಲ್ಲಿ ದೇಶಕ್ಕೆ ನುಸುಳುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕು’ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

‘ಈಗಾಗಲೇ ಬಾಂಗ್ಲಾ ದೇಶದ ರೊಹಿಂಗ್ಯಾ ಮುಸ್ಲಿಮರಿಂದ ದೇಶ ಸಮಸ್ಯೆ ಎದುರಿಸುತ್ತಿದೆ. ಅಫ್ಗಾನಿಸ್ತಾನ ವಿಚಾರದಲ್ಲಿ ಅಲ್ಲಿನ ಮುಸ್ಲಿಮರನ್ನು ಕೇಂದ್ರ ಸರ್ಕಾರ ತಲೆ ಮೇಲೆ ಇಟ್ಟುಕೊಳ್ಳುವುದು ಬೇಡ. ನಕಲಿ ಖಾತೆಗಳನ್ನು ತೆರೆಯುವ ಮೂಲಕ ಏನೇನೋ ನಡೆಯುತ್ತಿದೆ. ಹೀಗಿರುವಾಗ ಅಲ್ಲಿನ ಮುಸ್ಲಿಮರು, ತಾಲಿಬಾನ್ ಉಗ್ರರು ದೇಶಕ್ಕೆ ನುಸುಳುವುದು ದೊಡ್ಡ ಮಾತಲ್ಲ. ತಕ್ಷಣವೇ ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆಗ್ರಹಿಸಿದರು.

‘ಕೋವಿಡ್ 3ನೇ ಅಲೆಯ ನೆಪದಲ್ಲಿ, ಗಣೇಶೋತ್ಸವ ಆಚರಣೆಗೆ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮ ಖಂಡಿ ಆ. 21ರಂದು ರಾಜ್ಯದ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸರ್ಕಾರದ ನಿರ್ಧಾರವನ್ನು ಶ್ರೀರಾಮ ಸೇನೆ ಸಂಘಟನೆ ವಿರೋಧಿಸುತ್ತದೆ. ಈ ಆದೇಶವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ತೆಲಂಗಾಣ, ಮಹಾರಾಷ್ಟ್ರ ಸರ್ಕಾರಗಳು ಆರು ತಿಂಗಳ ಮೊದಲೇ ಈ ಬಗ್ಗೆ ಸ್ಪಷ್ಟಪಡಿಸಿವೆ. ಆದರೆ, ಇಲ್ಲಿನ ಸರ್ಕಾರ ಕಡಿಮೆ ಅವಧಿಯಲ್ಲಿ ಆದೇಶ ಹೊರಡಿಸಿದೆ. ಹಿಂದೂ ದೇವಸ್ಥಾನ ಮತ್ತು ಜಾತ್ರೆಗಳಿಗೆ ಮಾತ್ರ ನಿರ್ಬಂಧ ಹಾಕುತ್ತಿರುವುದೇಕೆ? ಇತರ ಆಚರಣೆಗೆ ನಿರ್ಬಂಧ ವಿಧಿಸಿಲ್ಲ. ಶಾಲಾ– ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಂದೂಗಳ ಆಚರಣೆಗೇಕೆ ನಿರ್ಬಂಧ ಹಾಕುತ್ತಿದೆ?’ ಎಂದು ಕೇಳಿದರು.

‘ನಿಯಮಗಳನ್ನು ಪಾಲಿಸುತ್ತೇವೆ. ಆದರೆ, ಅವೈಜ್ಞಾನಿಕ ಆದೇಶ ಹಿಂಪಡೆಯಬೇಕು. ಬಿಜೆಪಿ ನಾಯಕರು ಲಕ್ಷಾಂತರ ಜನರ ಭಾವನೆ ಗೌರವಿಸುತ್ತಿಲ್ಲ. ಇದು ಸರಿಯಲ್ಲ. ಕೆಲವು ಅಧಿಕಾರಿಗಳು ಸರ್ಕಾರವನ್ನು ದಾರಿ ತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ್ದಾರೆ. ರಾಜ್ಯದ ಮೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲಾಗುತ್ತಿದೆ. ಕೇಂದ್ರ ಸಚಿವರು ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಆಗ ಕೊರೊನಾ ಹರಡುವುದಿಲ್ಲವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಹಿಂದುತ್ವದ ಹೆಸರಿನಲ್ಲಿ ಮಂತ್ರಿಗಳಾದವರು, ಸಂಪ್ರದಾಯಕ್ಕೆ ಭಂಗವಾದಾಗ ಮಾತನಾಡುತ್ತಿಲ್ಲವೇಕೆ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.