ಬೆಳಗಾವಿ: ತಮ್ಮ ಮತ್ತು ಕುಟುಂಬ ಸದಸ್ಯರ ಆಸ್ತಿ ಘೋಷಣೆಗೆ ಸಂಬಂಧಿಸಿ ಉತ್ತರ ನೀಡುವಂತೆ ಮೇಯರ್ ಮಂಗೇಶ ಪವಾರ ಮತ್ತು ಮಹಾನಗರ ಪಾಲಿಕೆ ಸದಸ್ಯ ಜಯಂತ ಜಾಧವ ಅವರಿಗೆ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು, ಮಂಗಳವಾರ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
‘ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್(ಕೆಎಂಸಿ) ಕಾಯ್ದೆ–1976ರ ಕಲಂ 19ರನ್ವಯ, ತಮ್ಮ ಮತ್ತು ಕುಟುಂಬ ಸದಸ್ಯರ ಚರಾಸ್ತಿ, ಸ್ಥಿರಾಸ್ತಿ ಘೋಷಣೆಯಲ್ಲಿ ಮಂಗೇಶ ಮತ್ತು ಜಯಂತ ಸುಳ್ಳು, ಅಪೂರ್ಣ ಮಾಹಿತಿ ನೀಡಿದ್ದಾರೆ ಎಂದು ರಾಜಕುಮಾರ ಟೋಪಣ್ಣವರ ದೂರಿದ್ದರು. ಅದನ್ನು ಆಧರಿಸಿ ಪಾಲಿಕೆ ಆಯುಕ್ತರು ತನಿಖೆ ನಡೆಸಿ, ಮಾಹಿತಿ ಅಪೂರ್ಣವಾದ ಕುರಿತು 2025ರ ಜುಲೈ 4ರಂದು ವರದಿ ಕೊಟ್ಟಿದ್ದಾರೆ. ಹಾಗಾಗಿ ನೋಟಿಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರ ಕೊಡಬೇಕು’ ಎಂದು ಸೂಚಿಸಿದ್ದಾರೆ.
‘ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ನಂತರ ಒಂದು ತಿಂಗಳೊಳಗೆ ಮತ್ತು ವರ್ಷಕ್ಕೊಮ್ಮೆ ಆಸ್ತಿ ಹಾಗೂ ಸಾಲದ ವಿವರಗಳ ಸಲ್ಲಿಕೆ ಕಡ್ಡಾಯ. ಇದನ್ನು ಪಾಲಿಸದಿದ್ದರೆ ಕೆಎಂಸಿ ಕಾಯ್ದೆ–1976ರ ಕಲಂ 19ರನ್ವಯ ಸದಸ್ಯತ್ವ ರದ್ದುಪಡಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.