ಬೆಳಗಾವಿ: ಖಾನಾಪುರ ತಾಲ್ಲೂಕಿನ ಲೋಂಡಾ ಬಳಿ ಪಾಂಡರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ರಕ್ಷಿಸಿದರು.
ತಮ್ಮ ಜಮೀನಿನಲ್ಲಿರುವ ಮನೆಯಲ್ಲಿ ವ್ಯಕ್ತಿ ಇದ್ದರು. ನದಿಯಲ್ಲಿ ದಿಢೀರನೆ ನೀರಿನ ಪ್ರಮಾಣ ಹೆಚ್ಚಾದ್ದರಿಂದ ಬರಲಾರದೆ ಸಿಲುಕಿದ್ದರು. ತಾವು ಸಿಲುಕಿಕೊಂಡಿರುವುದನ್ನು ಟಾರ್ಚ್ ದೀಪದ ಮೂಲಕ ಅವರು ತಿಳಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯರು ವಿಡಿಯೊ ಮಾಡಿದ್ದರು. ಪೊಲೀಸರಿಗೂ ವಿಷಯ ಮುಟ್ಟಿಸಿದ್ದರು.
ಖಾನಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಶಿಂಧೆ ನೇತೃತ್ವದಲ್ಲಿ ಲೋಂಡಾ ಪೊಲೀಸರು ಬೋಟ್ನಲ್ಲಿ ತೆರಳಿ ವ್ಯಕ್ತಿಯನ್ನು ರಕ್ಷಿಸಿದರು. ‘ನದಿಯಲ್ಲಿ ನೀರಿನ ಪ್ರಮಾಣ ಇನ್ನೊಂದು ಅಡಿ ಹೆಚ್ಚಾಗಿದ್ದರೂ ವ್ಯಕ್ತಿಯ ಪ್ರಾಣಕ್ಕೆ ಅಪಾಯವಿತ್ತು. ನಮ್ಮ ಪೊಲೀಸರು ಧೈರ್ಯದಿಂದ ಕಾರ್ಯಾಚರಣೆ ನಡೆಸಿ, ಅವರನ್ನು ರಕ್ಷಿಸಿದ್ದಾರೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಗೋಕಾಕ ತಾಲ್ಲೂಕಿನ ಕುಂದರಗಿ ಆಡುಸಿದ್ದೇಶ್ವರ ಮಠದಲ್ಲಿ ಸಿಲುಕಿದ್ದ ಸ್ವಾಮೀಜಿ ಮತ್ತು ನಾಲ್ವರನ್ನು ಎಸ್ಡಿಆರ್ಎಫ್ ತಂಡದವರು ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.