
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಚಿಕ್ಕೋಡಿ ತಾಲ್ಲೂಕು ಅಂಬೇಡ್ಕರ್ ಜನಜಾಗೃತಿ ವೇದಿಕೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಭಾರತದ ಸಂವಿಧಾನ ಪೀಠಿಕೆಯನ್ನು ಹಿಡಿದು ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಸವೇಶ್ವರ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮಿನಿವಿಧಾನಸೌಧಕ್ಕೆ ತೆರಳಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಪರಿಮಳಾ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.
‘ಡಿ.31ರೊಳಗೆ ಆಯಾ ರಾಜ್ಯ ಸರ್ಕಾರಗಳು ಅವಶ್ಯವಿದ್ದಲ್ಲಿ ಹೊಸ ಜಿಲ್ಲೆ ಹಾಗೂ ತಾಲ್ಲೂಕುಗಳನ್ನು ರಚಿಸಿಕೊಳ್ಳಬಹುದೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕಳೆದ ನಾಲ್ಕು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ಮಾಡುತ್ತಲೇ ಇದ್ದು, ಯಾವುದೇ ಸಬೂಬು ಹೇಳದೇ ರಾಜ್ಯ ಸರ್ಕಾರ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಸ್.ವೈ. ಹಂಜಿ, ರುದ್ರಪ್ಪ ಸಂಗಪ್ಪಗೋಳ, ಸುರೇಶ ಬ್ಯಾಕೂಡ, ನಾಗೇಶ ಮಾಳಿ, ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಸುದರ್ಶನ ತಮ್ಮಣ್ಣವರ, ಅರ್ಜುನ ಮಾನೆ, ರಾಜು ಗಸ್ತಿ, ಮುತ್ತು ರಾಯಣ್ಣವರ, ಚೇತನ ಹೊನ್ನಗೋಳ, ಬಾಬು ಗಟ್ಟಿ, ಸುರೇಶ ಈಟಿಕರ, ತುಕಾರಂ ಗಟ್ಟಿ ಇದ್ದರು.
2ನೇ ದಿನ ಪೂರೈಸಿದ ಧರಣಿ: ಚಿಕ್ಕೋಡಿ ಜಿಲ್ಲಾ ಘೋಷಣೆಗಾಗಿ ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಪ್ರತ್ಯೇಕ ಧರಣಿ ಮಂಗಳವಾರ 2ನೇ ದಿನ ಪೂರೈಸಿತು.
ಸಂಜು ಬಡಿಗೇರ, ಚಂದ್ರಶೇಖರ ಅರಬಾವಿ, ಚಂದ್ರಕಾಂತ ಹುಕ್ಕೇರಿ, ಅನೀಲ ನಾವಿ, ರಮೇಶ ಪಾಟೀಲ, ಶ್ರೀಕಾಂತ ಅಸೋದೆ, ಶಿವಾಜಿ ಖಾಡೆ, ಸುರೇಶ ಮಾನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.