ADVERTISEMENT

ಪಿಯುಸಿ ಫಲಿತಾಂಶ: ರಡ್ಡೇರಟ್ಟಿಯ ರೈತನ ಮಗ ಡಿಸ್ಟಿಂಕ್ಷನ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 15:30 IST
Last Updated 15 ಜುಲೈ 2020, 15:30 IST
ಯಲ್ಲಾಲಿಂಗ ಕುರುಬಗಟ್ಟಿ
ಯಲ್ಲಾಲಿಂಗ ಕುರುಬಗಟ್ಟಿ   

ಕೌಜಲಗಿ: ಸಮೀಪದ ರಡ್ಡೇರಟ್ಟಿಯ ರೈತ ದಂಪತಿ ಮಹಾದೇವ–ರಾಜೇಶ್ವರಿ ಪುತ್ರ ಯಲ್ಲಾಲಿಂಗ ಕುರುಬಗಟ್ಟಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ (ಶೇ 95.5) ತೇರ್ಗಡೆಯಾಗಿ ಸಾಧನೆ ತೋರಿದ್ದಾರೆ.

ಇಲ್ಲಿನ ಡಾ.ಎಂ.ಎಂ. ದಳವಾಯಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ 95.84ರಷ್ಟು ಅಂಕ ಗಳಿಸಿದ್ದ ಅವರು, ಧಾರವಾಡದ ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜು ಸೇರಿದ್ದರು. ಗಣಿತದಲ್ಲಿ 100ಕ್ಕೆ 100 ಅಂಕ ಪಡೆದು ಕಾಲೇಜಿಗೆ 2ನೇ ಸ್ಥಾನ ಪಡೆದಿದ್ದಾರೆ. ಭೌತವಿಜ್ಞಾನದಲ್ಲಿ 99, ರಸಾಯನವಿಜ್ಞಾನದಲ್ಲಿ 98, ಜೀವವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ.

‘ನಮ್ಮದು ಕೃಷಿ ಕುಟುಂಬ ಆಗಿರುವುದರಿಂದ ಬಿ.ಎಸ್ಸಿ. ಅಗ್ರಿ ಕೋರ್ಸ್‌ ಸೇರಿ ಎಂ.ಎಸ್ಸಿ. ಅಧ್ಯಯನ ಮಾಡಬೇಕು ಎಂದುಕೊಂಡಿದ್ದೇನೆ. ಕೃಷಿಯಲ್ಲಿ ಸಾಧಿಸುವ ಗುರಿ ಇದೆ. ತಂದೆ-ತಾಯಿ ಬೇಸಾಯ ಮಾಡಿ ನನಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಚೆನ್ನಾಗಿ ಓದಿ ಅವರಿಗೆ ನೆರವಾಗುತ್ತೇನೆ. ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿ ಆದಾಯ ದ್ವಿಗುಣಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಯಲ್ಲಾಲಿಂಗ ಹೇಳಿದರು.

ADVERTISEMENT

‘ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಕಾಲೇಜಿನಲ್ಲಿ ತರಗತಿಗಳು ಇರುತ್ತಿದ್ದವು. ಅವುಗಳಿಗೆ ತಪ್ಪದೇ ಹಾಜರಾಗುತ್ತಿದ್ದೆ. ಬಳಿಕ ರಾತ್ರಿ 10ರವರೆಗೆ ಓದಿಕೊಳ್ಳುತ್ತಿದ್ದೆ. ಇಂಗ್ಲಿಷ್ ವಿಷಯದ ಪರೀಕ್ಷೆ ಬಾಕಿ ಇರುವಾಗಲೇ ಕೋವಿಡ್–19 ಲಾಕ್‌ಡೌನ್‌ದಿಂದ ಹಳ್ಳಿಗೆ ಬರಬೇಕಾಯಿತು. ಇಲ್ಲಿ ಕೃಷಿ ಕೆಲಸದೊಂದಿಗೆ 4–5 ತಾಸು ಓದಿಕೊಳ್ಳುತ್ತಿದೆ. ಉತ್ತಮ ಫಲಿತಾಂಶ ಬಂದಿರುವುದು ಖುಷಿ ತಂದಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.