ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ, ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಹಾಗೂ ಅವರ ಗುಂಪಿನವರು ಭರ್ಜರಿ ಗೆಲುವು ಸಾಧಿಸಿದರು.
8 ಸ್ಥಾನಗಳಿಗೆ 13 ಮಂದಿ ಕಣದಲ್ಲಿದ್ದರು. ರಾಮದುರ್ಗದಿಂದ ಅಶೋಕ ಮೆಟಗುಡ್ಡ (3,056 ಮತಗಳು), ಸವದತ್ತಿಯಿಂದ ದುರಗಪ್ಪ ಟೋಪೋಜಿ (3,021), ಬಸವರಾಜ ಬಸಲಿಗುಂದಿ (2,881), ಅಥಣಿಯಿಂದ ಬಾಬುರಾವ್ ವಾಘಮೋಡೆ (2,772), ಗೋಕಾಕದಿಂದ ಡಾ.ರಾಜೇಂದ್ರ ಸಣ್ಣಕ್ಕಿ (3,047), ಚಿಕ್ಕೋಡಿಯಿಂದ ವಿನಾಯಕ ಅಪ್ಪಾಸಾಹೇಬ ಬಣಹಟ್ಟಿ (2,711), ಹುಕ್ಕೇರಿಯ ಶಂಕರರಾವ್ ವಿಠೋಬ ಹೆಗಡೆ (2,629) ಸಾಮಾನ್ಯ ವರ್ಗದಿಂದ ಆಯ್ಕೆಯಾದರು. ಮಹಿಳಾ ಮೀಸಲು ಕ್ಷೇತ್ರದಿಂದ ಇದೇ ಗುಂಪಿನ ವಾಸಂತಿ ಸಿದ್ದಪ್ಪ ಪೂಜೇರ (2,909) ಗೆಲುವು ಸಾಧಿಸಿದರು.
‘ಕನಕ ರಾಯಣ್ಣರ ಸ್ಫೂರ್ತಿ ತಂಡ’ದಿಂದ ಸ್ಪರ್ಧಿಸಿದ್ದ ಪ್ರಮೋದ ಎತ್ತಿನಮನಿ (1,090), ಸೋಮಪ್ಪ ಮಲ್ಲೂರ (1,172), ಶಂಕರ ಶ್ರೀಕಾಂತ ಹೆಗಡೆ (803), ಬಸವರಾಜ ಲಗಮಪ್ಪ ಮುತ್ನಾಳ (1,014) ಸಾಮಾನ್ಯ ವರ್ಗದಿಂದ ಹಾಗೂ ರೇಖಾ ರಾಜಶೇಖರ ದಳವಾಯಿ (887) ಮಹಿಳಾ ಮೀಸಲು ಕ್ಷೇತ್ರದಿಂದ ಸೋಲನುಭವಿಸಿದರು.
ನೆಹರೂ ನಗರದ ಕನಕ ಚಾರಿಟಬಲ್ ಶಾಲೆ ಆವರಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು. ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಘೋಷಿಸಲಾಯಿತು. ವಿಜೇತ ಗುಂಪಿನವರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಭಂಡಾರ ವಿಜಯೋತ್ಸವ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.