ಚಿಕ್ಕೋಡಿ: ಎಐ ತಂತ್ರಜ್ಞಾನವನ್ನು ಕಾರ್ಖಾನೆಯ ಹಿತಕ್ಕೆ ಬಳಸಬೇಡಿ. ರೈತರ ಅನುಕೂಲಕ್ಕೆ ಬಳಸಿ, ತಂತ್ರಜ್ಞಾನ ಆಧರಿಸಿ ತೂಕದ ಯಂತ್ರಗಳನ್ನು ಆನಲೈನ್ ಮಾಡಬೇಕು" ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಅಧ್ಯಕ್ಷ , ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.
ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ’ಕರ್ನಾಟಕ ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆಗಾಗಿ ಆಂದೋಲನ ನಡೆಯಲಿದೆ. ಕಾರ್ಖಾನೆಯ ಮಾಲೀಕರು ಲೂಟಿಕೋರರು, ಸರ್ಕಾರ ಲೂಟಿಕೋರರ ಬೆನ್ನಿಗೆ ನಿಂತಿದೆ. ರೈತರ ಬೆನ್ನಿಗೆ ನಿಂತಿಲ್ಲ’ ಎಂದರು.
ಕರ್ನಾಟಕ ರೈತ ಸಂಘದ ಅಧ್ಯಕ್ಷ ಗಣೇಶ ಇಳಿಗಾರ ಮಾತನಾಡಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರನ್ನು ವಂಚಿಸಿದ್ದಾರೆ.ಕಬ್ಬು ಬೆಳೆಗಾರರಿಗೆ ಸೂಕ್ತ ದರ ನೀಡುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿ ತೆರಳಲಾಗುವುದು" ಎಂದರು.
ಅ.16ರಂದು ಮಹಾರಾಷ್ಟ್ರದ ಜೈಸಿಂಗಪುರದಲ್ಲಿ ನಡೆಯುವ 24ನೇ ಕಬ್ಬು ಸಮ್ಮೇಳನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವಾಭಿಮಾನಿ ಶೇತ್ಕರಿ ಸಂಘಟನೆಯಿಂದ ರೈತರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಧರಿಖಾನ ಅಜ್ಜನವರ ಸಾನ್ನಿಧ್ಯದಲ್ಲಿ ನಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಾಸೋ ಪವಾರ ವಹಿಸಿದ್ದರು. ರಾಜು ಖಿಚಡೆ, ತಾತ್ಯಾಸಾಹೇಬ ಕೇಸ್ರೆ, ಬಂಟಿ ಪಾಟೀಲ, ಶೀತಲ ಸೋಬಾನೆ, ಅಭಿಜಿತ್ ಬಿರನಾಳೆ, ರಮೇಶ ಪಾಟೀಲ, ಅಕ್ಷಯ ಪವಾರ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.