ADVERTISEMENT

ವಿಭಜಕಕ್ಕೆ ಧ್ವಜ; ಮಾದಿಗ ಸಮಾಜದಿಂದ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 3:00 IST
Last Updated 28 ಫೆಬ್ರುವರಿ 2026, 3:00 IST
ರಾಮದುರ್ಗ ತಾಲ್ಲೂಕು ಪಂಚಾಯ್ತಿ ಎದುರಿನ ಮುಖ್ಯರಸ್ತೆಯ ಮೇಲೆ ಬಂಜಾರ ಸಮಾಜದ ಧರ್ಮಗುರುಗಳ ಭಾವಚಿತ್ರ ತೆರವುಗೊಳಿಸುವಂತೆ ಅಗ್ರಹಿಸಿ ಮಾದಿಗ ಸಮಾಜದವರು ರಸ್ತೆ ತಡೆ ನಡೆಸಿದರು
ರಾಮದುರ್ಗ ತಾಲ್ಲೂಕು ಪಂಚಾಯ್ತಿ ಎದುರಿನ ಮುಖ್ಯರಸ್ತೆಯ ಮೇಲೆ ಬಂಜಾರ ಸಮಾಜದ ಧರ್ಮಗುರುಗಳ ಭಾವಚಿತ್ರ ತೆರವುಗೊಳಿಸುವಂತೆ ಅಗ್ರಹಿಸಿ ಮಾದಿಗ ಸಮಾಜದವರು ರಸ್ತೆ ತಡೆ ನಡೆಸಿದರು   

ರಾಮದುರ್ಗ: ಪಟ್ಟಣದ ತಾಲ್ಲೂಕು ಪಂಚಾಯ್ತಿ ಎದುರಿನ ಮುಖ್ಯರಸ್ತೆಯ ವಿಭಜಕದಲ್ಲಿ ಅಳವಡಿಸಿರುವ ಬಂಜಾರ ಸಮುದಾಯದ ಧ್ವಜಸ್ತಂಭ ತೆರವುಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯದ ಜನರು ರಸ್ತೆ ತಡೆ ನಡೆಸಿದರು.

ಕಳೆದ ಮಂಗಳವಾರ ಸೇವಾಲಾಲ ಜಯಂತಿ ಆಚರಣೆ ಸಮಯದಲ್ಲಿ ತಾಲ್ಲೂಕು ಪಂಚಾಯ್ತಿ ಮುಂಭಾಗದಲ್ಲಿನ ಬೆಳಗಾವಿ ರಸ್ತೆಯ ವಿಭಜಕದಲ್ಲಿ ಸೇವಾಲಾಲ ಚಿತ್ರವಿರುವ ಧ್ವಜ ಹಾರಿಸಿಲಾಗಿತ್ತು. ಗುರುವಾರ ದಲಿತ ಸಂಘಟನೆಗಳ ಕೆಲ ಮುಖಂಡರು ರಸ್ತೆ ಮಧ್ಯದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಮುಂದಾಗಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಉಭಯ ಸಮುದಾಯದ ಮುಖಂಡರ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದರು. ಈ ವೇಳೆ ರಸ್ತೆ ವಿಭಜಕದ ಎರಡೂ ಬದಿಗೆ ಒಂದೊಂದು ಸಮುದಾಯದ ಧ್ವಜಸ್ತಂಭ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದರು.

ADVERTISEMENT

ಆದರೆ ಶುಕ್ರವಾರ ಬೆಳಿಗ್ಗೆಯಿಂದ ಗಡದಕೇರಿ ಕೆಲವು ಯುವಕರು ಮತ್ತು ಮಹಿಳೆಯರು ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಮುಂಚಿನಂತೆ ಯಾವುದೇ ಧ್ವಜ ಹಾಕುವಂತಿಲ್ಲ ಎಂದು ಪ್ರತಿಭಟನೆ ನಡೆಸಿದರು. ಸಂಜೆ 4ರ ಸುಮಾರಿಗೆ ಪಕ್ಕದ ತಾಲ್ಲೂಕಿನ ಕೆಲವು ಮಾದಿಗ ಮುಖಂಡರು ಆಗಮಿಸಿ ರಸ್ತೆ ತಡೆ ಆರಂಭಿಸಿದರು. ಸಂಜೆ 7 ಗಂಟೆವರೆಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.ಈ ವೇಳೆ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಶನಿವಾರ ಬೆಳಗಿನ ಅವಧಿಯೊಳಗಾಗಿ ಧ್ವಜ ತೆರವು ಮಾಡಿ ಯಥಾಸ್ಥಿತಿ ಕಾಪಾಡಬೇಕು. ಇಲ್ಲದಿದ್ದರೆ ರಸ್ತೆ ಮಧ್ಯದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‍ಪಿ ಚಿದಂಬರ ಮಡಿವಾಳರ, ಸಿಪಿಐ ವಿನಾಯಕ ಬಡಿಗೇರ, ಪಿಎಸ್‌ಐ ಸವಿತಾ ಮುನ್ಯಾಳ ಸೇರಿದಂತೆ ನೂರಾರು ಪೊಲೀಸರು ಪ್ರತಿಭಟನೆಕಾರರ ಮನವೊಲಿಸಲು ಮುಂದಾಗಿದ್ದರು.

ಪ್ರಕರಣ ದಾಖಲು: ಗುರುವಾರ ಉಭಯ ಸಮುದಾಯದ ನಾಯಕರು ಒಪ್ಪಂದದ ಪ್ರಕಾರ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಬಂಜಾರ ಸಮುದಾಯದ ಕಾನೂನು ಸಂಘರ್ಷಕ್ಕೊಳಗಾದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ ನಿಂದ ಮಾದಿಗ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಶಾಂತವಾಗಿದ್ದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ವಿವಾದಿತ ಪೋಸ್ಟ್‌ ಹಾಕಿದ ಬಗ್ಗೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.