ADVERTISEMENT

ರಾಮದುರ್ಗ | ಬೆಂಬಲ ಬೆಲೆಯಲ್ಲಿ ಹೆಸರು, ಸೂರ್ಯಕಾಂತಿ ಖರೀದಿ: ಅಶೋಕ ಪಟ್ಟಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:52 IST
Last Updated 12 ಅಕ್ಟೋಬರ್ 2025, 5:52 IST
ರಾಮದುರ್ಗದ ಎಪಿಎಂಸಿ ಪ್ರಾಂಗಣದಲ್ಲಿ ಟಿಎಪಿಸಿಎಂಸಿ ಮತ್ತು ಕರ್ನಾಟಕ ಸಹಕಾರ ಮಹಾಮಂಡಳ ಆರಂಭಿಸಿರುವ ಹೆಸರು, ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರಗಳನ್ನು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.
ರಾಮದುರ್ಗದ ಎಪಿಎಂಸಿ ಪ್ರಾಂಗಣದಲ್ಲಿ ಟಿಎಪಿಸಿಎಂಸಿ ಮತ್ತು ಕರ್ನಾಟಕ ಸಹಕಾರ ಮಹಾಮಂಡಳ ಆರಂಭಿಸಿರುವ ಹೆಸರು, ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರಗಳನ್ನು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.   

ರಾಮದುರ್ಗ: ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಹಾನಿಯಾಗಬಾರದು ಎಂದು ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿದೆ. ರೈತರು ಬೆಳೆದ ದವಸಧಾನ್ಯವನ್ನು ಸರ್ಕಾರ ನೀಡಿರುವ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ವಿಧಾನ ಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಶುಕ್ರವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ಟಿಎಪಿಸಿಎಂಸ್ ಸಹಯೋಗದಲ್ಲಿ ಕರ್ನಾಟಕ ಸಹಕಾರ ಮಹಾ ಮಂಡಳದಿಂದ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಮತ್ತು ಪ್ರಾದೇಶಿಕ ಎಣ್ಣೆ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿರು.

ಸರ್ಕಾರಗಳು ಜಾರಿಗೆ ತರುವ ಜನಪರ ಯೋಜನೆಗಳು ಗ್ರಾಮೀಣ ಪ್ರದೇಶದ ರೈತರು ಮತ್ತು ಜನಸಾಮಾನ್ಯರಿಗೆ ತಲುಪಲು ಪಂಚಾಯ್ತಿ ಮಟ್ಟದಲ್ಲಿ ಸೂಕ್ತ ಪ್ರಚಾರ ಮಾಡಬೇಕು ಅಂದಾಗ ಮಾತ್ರ ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲು ಸಾಧ್ಯವಿದೆ. ಅಧಿಕಾರಿಗಳು ಸರಿಯಾಗಿ ಪ್ರಚಾರ ಮಾಡಿ ಎಲ್ಲರೂ ಯೋಜನೆಯ ಲಾಭ ಪಡೆದುಕೊಳ್ಳುವಂತೆ ನೋಸಿಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಮಳೆಗೆ ಹಾನಿಯಾಗಿರುವ ರೈತರ ಬೆಳೆಗೆ ಯೋಗ್ಯ ಪರಿಹಾರ ದೊರಕಲು ಅಧಿಕಾರಿಗಳು ರೈತರ ಬೆಳೆಯ ಹಾನಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಯಾವ ರೈತರಿಗೂ ಅನ್ಯಾಯವಾದಂತೆ ನೋಡಿಕೊಳ್ಳಬೇಕು. ಏಕೆಂದರೆ ಸರ್ಕಾರ ನೀಡುವ ಪರಿಹಾರ ರೈತರು ಮಾಡಿರುವ ಖರ್ಚು ಗಮನಿಸಿದರೆ ಯಾವುದಕ್ಕೂ ಸಾಲದು. ಅಧಿಕಾರಿಗಳು ವಿಶಾಲ ಮನೋಭಾವನೆಯಿಂದ ವರ್ತಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಫ್. ಬೆಳವಟಗಿ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಸೂರ್ಯಕಾಂತಿ ಖರೀದಿ ಮಾಡುತ್ತಿದ್ದು ಗುಣಮಟ್ಟದ ಬೆಳೆಗೆ ಉತ್ತಮ ಬೆಲೆ ಪಡೆಯಬೇಕು. ಬೆಂಬಲ ಬೆಲೆಯಲ್ಲಿ ಕಳಪೆ ಕಾಳುಗಳನ್ನು ತಂದು ಮರಳಿ ತೆಗೆದುಕೊಂಡು ಹೋಗಬಾರದು ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಕಾರ್ಯದರ್ಶಿ ತುಳಜಪ್ಪ ನಡಗಡ್ಡಿ ಮಾತನಾಡಿ, ಹೆಸರು ಬೆಳೆಯನ್ನು ಕ್ವಿಂಟಲ್‍ಗೆ ರೂ. 8,768 ರಂತೆ ಒಬ್ಬ ರೈತರಿಂದ ಪ್ರತಿ ಎಕರೆಗೆ ಮೂರು ಕ್ವಿಂಟಲ್ ಗರಿಷ್ಠ, ಇಪ್ಪತ್ತು ಕ್ವಿಂಟಲ್ ಖರೀದಿ ಮಾಡಲಾಗುವುದು. ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‍ಗೆ ರೂ.7,721 ರಂತೆ ಪ್ರತಿ ರೈತರಿಂದ ಎಕರೆಗೆ ನಾಲ್ಕು ಕ್ವಿಂಟಲ್, ಗರಿಷ್ಟ 20 ಕ್ವಿಂಟಲ್ ಖರೀದಿ ಮಾಡಲಾಗುವುದು. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವ ಬಯಸುವ ರೈತರು ಬ್ಯಾಂಕ್ ಪಾಸ್‍ಬುಕ್, ಪಹಣಿ, ಆಧಾರ ಕಾರ್ಡ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ರೈತರಿಗೆ ರಿಯಾಯತಿ ದರದಲ್ಲಿ ಹಿಂಗಾರಿ ಹಂಗಾಮಿನ ಬಿತ್ತನೆ ಬೀಜಗಳನ್ನು ಅಶೋಕ ಪಟ್ಟಣ ವಿತರಿಸಿದರು. ಟಿಎಪಿಸಿಎಂಎಸ್ ನಿರ್ದೇಶಕರಾದ ಬಿ.ಎಸ್. ಬೆಳವಣಕಿ, ಕುಬೇರಗೌಡ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಶಿವಾನಂದ ಮಠ, ಪರಪ್ಪ ಜಂಗವಾಡ, ಶಿವಾನಂದ ಚಿಕ್ಕೋಡಿ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.