ADVERTISEMENT

ಕಾಂಗ್ರೆಸ್ ಮುಖಂಡನ ತೋಟದಲ್ಲಿ ರಮೇಶ ಜಾರಕಿಹೊಳಿ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 8:13 IST
Last Updated 9 ಜುಲೈ 2021, 8:13 IST
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕುಡಚಿಯಲ್ಲಿ ಕಾಂಗ್ರೆಸ್ ಮುಖಂಡ ಶ್ಯಾಮ್ ಘಾಟಗೆ ಅವರನ್ನು ಗುರುವಾರ ಭೇಟಿಯಾದರು
ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಕುಡಚಿಯಲ್ಲಿ ಕಾಂಗ್ರೆಸ್ ಮುಖಂಡ ಶ್ಯಾಮ್ ಘಾಟಗೆ ಅವರನ್ನು ಗುರುವಾರ ಭೇಟಿಯಾದರು   

ಬೆಳಗಾವಿ: ಗೋಕಾಕ್‌ನಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ರಾಯಬಾಗ ತಾಲ್ಲೂಕು ಕುಡಚಿ ಪಟ್ಟಣದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಶ್ಯಾಮ್ ಘಾಟಗೆ ಅವರ ಮನೆಗೆ ಗುರುವಾರ ಭೇಟಿ ನೀಡಿ ಚರ್ಚಿಸಿರುವುದು ಅಚ್ಚರಿ ಮೂಡಿಸಿದೆ.

ಸಹೋದರ ಲಖನ್‌ ಜಾರಕಿಹೊಳಿ, ಅಳಿಯ ಅಂಬಿರಾವ ಪಾಟೀಲ ಮತ್ತು ‍ಪುತ್ರ ಅಮರನಾಥ ಜಾರಕಿಹೊಳಿ ಅವರೊಂದಿಗೆ ತೆರಳಿ ಘಾಟಗೆ ಅವರೊಂದಿಗೆ ತಾಸಿಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಅವರು ಮಾಡುತ್ತಿರುವ ಕೃಷಿಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ತೋಟದಲ್ಲಿ ವಿಹರಿಸಿದ್ದಾರೆ.

ರಾಜಕೀಯವಾಗಿ, ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ ಅವರ ಬದ್ಧ ವೈರಿಯನ್ನು (ಶ್ಯಾಮ್‌ ಘಾಟಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು) ರಮೇಶ ಭೇಟಿ ಆಗಿರುವುದು ಹಲವು ವಿಶ್ಲೇಷಣೆಗಳಿಗೆ ಎಡೆಮಾಡಿಕೊಟ್ಟಿದೆ ಮತ್ತು ಕುತೂಹಲಕ್ಕೂ ಕಾರಣವಾಗಿದೆ.

ADVERTISEMENT

ಪಿ.ರಾಜೀವ ತಮ್ಮೊಂದಿಗೆ ಅಂತರ ಕಾಯ್ದುಕೊಂಡಿರುವುದಕ್ಕೆ ರಮೇಶ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ನಮ್ಮ ಜಮೀನಲ್ಲಿ 10 ಅಡಿ ಅಂತರದಲ್ಲಿ ಕಬ್ಬು ಬೆಳೆದಿರುವುದು ಮೊದಲಾದ ಕೃಷಿ ವಿಧಾನಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಘಾಟಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.