ADVERTISEMENT

ರಾಜ್ಯ ನಾಯಕರ ಭೇಟಿಗೆ ತೆರಳಿದ ರಮೇಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 14:24 IST
Last Updated 28 ಜೂನ್ 2021, 14:24 IST

ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿರುವ ಗೋಕಾಕ ಕ್ಷೇತ್ರದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಪಕ್ಷದ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ ಬೆಂಗಳೂರಿಗೆ ಸೋಮವಾರ ತೆರಳಿದ್ದಾರೆ.

‘ಅವರು ಮತ್ತೊಮ್ಮೆ ಮುಂಬೈಗೆ ತೆರಳಿ, ಮಹಾರಾಷ್ಟ್ರದ ವಿಧಾನಸಭೆ ವಿರೋಧಪಕ್ಷದ ನಾಯಕ ದೇವೇಂದ್ರ ಫಡಣವಿಸ್ ಸೇರಿದಂತೆ ಬಿಜೆಪಿ ನಾಯಕರನ್ನು ಭೇಟಿ ಆಗಲಿದ್ದಾರೆ. ಅವರಿಗೆ ಹೈಕಮಾಂಡ್‌ನಿಂದಲೂ ಬುಲಾವ್ ಬಂದಿದೆ’ ಎಂಬ ವದಂತಿಗಳು ಹರಡಿದ್ದವು. ‘ನನ್ನ ರಾಜೀನಾಮೆ ವಿಷಯವು ಮುಂಬೈನಲ್ಲಿ ತೀರ್ಮಾನವಾಗಲಿದೆ’ ಎಂದು ಅವರು ಹೇಳಿದ್ದರಿಂದ ಭೇಟಿ ಬಗ್ಗೆ ಕುತೂಹಲ ಉಂಟಾಗಿತ್ತು. ಈ ನಡುವೆ, ಅವರು ಸೋಮವಾರ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

‘ಆತುರದ ನಿರ್ಧಾರ ಕೈಗೊಳ್ಳದಂತೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡದಂತೆ ಅವರ ಕಿರಿಯ ಸಹೋದರರೂ ಆಗಿರುವ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವೊಲಿಸಿದ್ದಾರೆ. ಬೆಂಗಳೂರಿನಿಂದ ವಾಪಸಾದ ನಂತರ ಸಹೋದರರು ಮತ್ತು ಕೆಲವು ಹಿತೈಷಿಗಳೊಂದಿಗೆ ಸಭೆ ನಡೆಸಿ, ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ನಿರ್ಧರಿಸಿದ್ದಾರೆ. ಸಿ.ಡಿ. ಪ್ರಕರಣದಲ್ಲಿ ಕ್ಲೀನ್‌ಚಿಟ್ ಸಿಕ್ಕ ಕೂಡಲೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ಅವರಿಗೆ ಸಿಕ್ಕಿರುವುದರಿಂದಾಗಿ, ರಾಜೀನಾಮೆ ನಿರ್ಧಾರದಿಂದ ಅವರು ಹಿಂದೆ ಸರಿಯುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅವರ ನಡೆಯು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.