ADVERTISEMENT

ಅಪ್ಪು ನೆನೆದು ಭಾವುಕರಾದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 5:30 IST
Last Updated 14 ನವೆಂಬರ್ 2021, 5:30 IST
ಗೋಕಾಕ ಶಾಸಕ ರಮೇಶ ಜಾರಕಿಹೊಳಿ
ಗೋಕಾಕ ಶಾಸಕ ರಮೇಶ ಜಾರಕಿಹೊಳಿ   

ಬೆಳಗಾವಿ: ಚಲನಚಿತ್ರ ನ‌ಟ ದಿವಂಗತ ಪುನೀತ್‌ ರಾಜ್‌ಕುಮಾರ್ ಸೂರ್ಯ- ಚಂದ್ರ ಇರುವವರೆಗೂ ಅಜರಾಮರವಾಗಿ ಇರಲಿದ್ದಾರೆ. ಅವರ ಸಾವು ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಭಾವುಕರಾದರು.

ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಅಪ್ಪುಗೆ ನುಡಿ-ಗೀತ ನಮನ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಪುನೀತ್ ಇಡೀ‌ ರಾಜ್ಯದ ಜನರ ಮನಸ್ಸು ಗೆದ್ದಿದ್ದಾರೆ. ಅವರ ಎಲ್ಲ ಚಲನಚಿತ್ರಗಳಲ್ಲೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಅವರ ಚಿತ್ರಗಳು ಸಮಾಜವನ್ನು ತಿದ್ದುವ ಕೆಲಸ ಮಾಡಿವೆ. ಈ‌ ಮೂಲಕ ಅನೇಕರು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ ಎಂದರು.

ADVERTISEMENT

ರಾಜ್‌ಕುಮಾರ್ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ಅವಿನಾಭಾವ ಸಂಬಂಧ ಇದೆ. ಗೋಕಾಕದ ಲಕ್ಷ್ಮಿ ಚಲನಚಿತ್ರ ಮಂದಿರಕ್ಕೆ ಡಾ.‌ರಾಜ್‌ ಕುಟುಂಬದವರು ಭೇಟಿ ನೀಡಿದ್ದಾರೆ. ಪುನೀತ್‌ ಆಗ ಬಹಳ ಚಿಕ್ಕವರಿದ್ದರು. ಸದಾ ಹಸನ್ಮುಖಿ ಹಾಗೂ ಸಮಾಜಮುಖಿ ಆಗಿ ಬದುಕಿದರು ಎಂದು ಭಾವುಕರಾದರು.

ಚಿತ್ರನಟ ಅಂಜನ್ ಮಾತನಾಡಿ, ಅಪ್ಪು ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಜನರ‌ ಮನಸ್ಸಿನಲ್ಲಿ ಜೀವಂತವಾಗಿ ಉಳಿದಿದ್ದಾರೆ ಎಂದರು.

ಅಂಕಲಗಿ ಮಠದ ಗುರುಸಿದ್ದ ಸ್ವಾಮೀಜಿ, ಅಪ್ಪು ತಮ್ಮ ಸೇವೆ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, 'ದೇಹ ಹೋದರೂ ಆತ್ಮ ಇಲ್ಲಿಯೇ ಉಳಿದುಕೊಂಡಿದೆ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳನ್ನು ಅಪ್ಪು ಮಾಡಿದರು.‌ ಅವರ ಸಮಾಧಿಗೆ ಇಂದಿಗೂ ಸಹಸ್ರಾರು ಜನ ಬಂದು ದರ್ಶನ ಪಡೆಯುತ್ತಿದ್ದಾರೆ. ಇದು ಜನರು ಅವರ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.