ADVERTISEMENT

ರಮೇಶ ಕಳೆದುಕೊಂಡ ವಸ್ತು ಯಾವುದು?: ಗೋಕಾಕದಲ್ಲೇ ತಿಳಿಸುವೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 18:24 IST
Last Updated 20 ಸೆಪ್ಟೆಂಬರ್ 2019, 18:24 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಅನರ್ಹ ಶಾಸಕ ಬಿಜೆ‍ಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವ ಮತ್ತು ಉಪಮುಖ್ಯಮಂತ್ರಿ ಆಗುತ್ತಾರೆ. ನನಗೆ ಈ ಬಗ್ಗೆ ಶೇ 99ರಷ್ಟು ವಿಶ್ವಾಸವಿದೆ. ನಂತರವಷ್ಟೇ ಅವರು ಕಳೆದುಕೊಂಡಿರುವ ‘ವಸ್ತು’ ಯಾವುದು ಎನ್ನುವುದನ್ನು ಗೋಕಾಕದಲ್ಲೇ ಸಮಾವೇಶ ನಡೆಸಿ ಬಹಿರಂಗಪಡಿಸುವೆ’ ಎಂದು ಶಾಸಕ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ತಿಳಿಸಿದರು.

‘ಈಗಲೇ ಹೇಳಿದರೆ ಚೆನ್ನಾಗಿರುವುದಿಲ್ಲ. ಅವರು ಯಾವುದಾದರೂ ಹುದ್ದೆಯಲ್ಲಿದ್ದಾಗ ಹೇಳಿದರಷ್ಟೇ ನನ್ನ ಮಾತುಗಳಿಗೆ ಮೌಲ್ಯ ಬರುತ್ತದೆ. ಅದಕ್ಕೆ ಕಾಲ ಕೂಡಿ ಬಂದಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

‘ಹಿಂದೆ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚೆನ್ನಾಗಿದ್ದ ರಮೇಶ, ಇಡಿ (ಜಾರಿ ನಿರ್ದೇಶನಾಲಯ)ಯಿಂದ ತಪ್ಪಿಸಿಕೊಳ್ಳಲು ಬಿಜೆಪಿಯತ್ತ ವಾಲಿದರೇ’ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆತ ಆರ್ಥಿಕವಾಗಿ ಖಾಲಿಯಾಗಿದ್ದಾನೆ. ದಿವಾಳಿಯಾಗಿದ್ದಾನೆ. ಆತನ ಬಳಿ ಏನೂ ಇಲ್ಲ. ಬಹಳ ಸಾಲ ಮಾಡಿಕೊಂಡಿದ್ದೇನೆ ಎಂದು ಈಚೆಗೆ ಗೋಕಾಕದಲ್ಲಿ ನಡೆದ ಸಮಾವೇಶದಲ್ಲೇ ಹೇಳಿಕೊಂಡಿದ್ದಾನೆ. ಎಲ್ಲವನ್ನೂ ಅವನ ಅಳಿಯ ಅಂಬಿರಾವ್ ಪಾಟೀಲ ತೆಗೆದುಕೊಂಡು ಹೋಗಿದ್ದಾನೆ’ ಎಂದು ವ್ಯಂಗ್ಯವಾಗಿ ಹೇಳಿದರು.

ADVERTISEMENT

‘ಇಡಿಯವರು ತಪ್ಪು ಮಾಡಿದ್ದವರಿಗೆ ಶಿಕ್ಷೆ ಕೊಡಿಸಲಿ. ಅದನ್ನು ಬಿಟ್ಟು ಅನವಶ್ಯವಾಗಿ ತೊಂದರೆ ಕೊಡಬಾರದು. ಕಾನೂನು ಪ್ರಕಾರ ನಡೆದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.