ADVERTISEMENT

ಕೆಎಲ್‌ಇ ಆಯುರ್ವೇದ ಕಾಲೇಜಿನಲ್ಲಿ ರಥಸಪ್ತಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 13:34 IST
Last Updated 19 ಫೆಬ್ರುವರಿ 2021, 13:34 IST
ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು
ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು   

ಬೆಳಗಾವಿ: ಇಲ್ಲಿನ ಶಹಾಪುರದಲ್ಲಿರುವ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ರಥಸಪ್ತಮಿ ಮತ್ತು ಅಗ್ನಿಹೋತ್ರ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಸ್ವಸ್ಥವೃತ್ತ್‌ ವಿಭಾಗ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು 24 ಸುತ್ತಿನ ಸೂರ್ಯ ನಮಸ್ಕಾರ ಅಭ್ಯಾಸವನ್ನು ಹಾಗೂ ಅಗ್ನಿಹೋತ್ರ ವಿಧಿಯನ್ನು ಮಾಡಿದರು.

ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥ ಡಾ.ಅಶೋಕ ಪಾಟೀಲ ಸ್ವಾಗತಿಸಿದರು. ಕುಷ್ಬೂ ನಿರೂಪಿಸಿದರು. ಡಾ.ಆಮಲ್ ಚಂದ್ರನ್‌ ವಂದಿಸಿದರು.

ADVERTISEMENT

‘ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ’

ಬೆಳಗಾವಿನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ ಬೆಳಗಾವಿ ಶಾಖೆ ಸಹಯೋಗದಲ್ಲಿ ರಥಸಪ್ತಮಿ ನಿಮಿತ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು.

ವಿವೇಕಾನಂದ ಕೇಂದ್ರ ಶಾಖೆಯ ಸಂಯೋಜಕ ಅಶೋಕ ಉಳ್ಳೇಗಡ್ಡಿ ಉದ್ಘಾಟಿಸಿ ಮಾತನಾಡಿ, ‘ಸೂರ್ಯ ನಮಸ್ಕಾರ ಮಾಡುವುದರಿಂದ ಸೂರ್ಯನ ಕಿರಣಗಳು ನಮ್ಮ ಶರೀರದ ಮೇಲೆ ಬಿದ್ದು ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ಸದೃಢ ದೇಹವನ್ನು ಹೊಂದಬಹುದು. ಆಗ ಮನಸ್ಸು ಕೂಡ ಚೆನ್ನಾಗಿರುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಂ. ಜಯಪ್ಪ, ‘ನಾವು ಪರಿಸರ ಸ್ನೇಹಿ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು. ಯೋಗ, ಧ್ಯಾನದಂತಹ ಚಟುವಟಿಕೆಗಳನ್ನು ನಿತ್ಯವೂ ಮಾಡಬೇಕು. ಉತ್ತಮ ಆಹಾರ ಪದ್ಧತಿ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ವಿವೇಕಾನಂದ ಕೇಂದ್ರದ ಸಹ ಸಂಯೋಜಕ ಕಿಶೋರ ಕಾಕಡೆ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ ಮಾತನಾಡಿದರು.

ಯೋಗ ಗುರು ಎಸ್.ಎಸ್. ಸಾರಾಪುರೆ ಅವರನ್ನು ಸನ್ಮಾನಿಸಲಾಯಿತು. ಚಲನಚಿತ್ರ ನಿರ್ಮಾಪಕ ಸುಧೀರ ಮುನ್ನೋಳ್ಳಿ, ಉಪ ಪ್ರಾಚಾರ್ಯ ಅನಿಲ ರಾಮದುರ್ಗ, ವಿವೇಕಾನಂದ ಕೇಂದ್ರದ ಸದಸ್ಯರಾದ ನಿಖಿಲ ನರಗುಂದಕರ, ರಾಜೇಶ್ವರಿ ಅಕ್ಕಿ, ಮಲ್ಲಿಕಾರ್ಜುನ ಜುಗಲೆ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌ ಶಾಖೆಯವರು ಪಾಲ್ಗೊಂಡಿದ್ದರು.

ನವ್ಯಶ್ರೀ ಶೆಟ್ಟಿ ಪ್ರಾರ್ಥಿಸಿದರು. ಸಚಿನ ಹಿರೇಮಠ ವಂದಿಸಿದರು. ಸಂಗೀತಾ ಲಮಾಣಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.