
ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ನ.25ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬೆಳಿಗ್ಗೆ 11.30 ಗಂಟೆಗೆ ಜರುಗಲಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ವಹಿಸಲಿದ್ದು, ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಸಮ ಕುಲಾಧಿಪತಿ ಡಾ.ಎಂ.ಸಿ.ಸುಧಾಕರ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಹಿರಿಯ ಇಂಗ್ಲಿಷ್ ಪ್ರಾಧ್ಯಾಪಕ, ಪದ್ಮಶ್ರೀ ಪುರಸ್ಕೃತ ಎ.ಎಸ್. ಕಿರಣಕುಮಾರ್ ಘಟಿಕೋತ್ಸವದ ಭಾಷಣ ಮಾಡುವರು’ ಎಂದರು.
‘ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾಜಿ ಛತ್ರು ಕಾಗಣಿಕರ್ ಅವರಿಗೆ ಶಿಕ್ಷಣ, ಸಮಾಜ ಸೇವೆ, ಪರಂಪರೆ ಸಂರಕ್ಷಣೆ ಕ್ಷೇತ್ರದಲ್ಲಿ ವಿನೋದ ಸುರೇಂದ್ರ ದೊಡ್ಡಣ್ಣವರ ಅವರಿಗೆ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು’ ಎಂದರು.
‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯವರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಜ್ಞಾನಮುಖಿ, ಸಮಾಜಮುಖಿ, ಉದ್ಯೋಗಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಶೈಕ್ಷಣಿಕವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿದೆ. ಹಿರೇಬಾಗೆವಾಡಿಯಲ್ಲಿ 126 ಎಕರೆ ಪ್ರದೇಶದಲ್ಲಿ ಆಡಳಿತ ಕಟ್ಟಡಗಳು ಹಾಗೂ ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಕಾರ್ಯವು ಮುಕ್ತಾಯ ಹಂತದಲ್ಲಿದ್ದು, ಮೂಲ ಸೌಕರ್ಯಗಳಾದ ರಸ್ತೆ ಹಾಗೂ ನೀರು ಸರಬರಾಜು ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.
‘ಸದರಿ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ 361 ಮಹಾವಿದ್ಯಾಲಯಗಳು ಸಂಯೋಜನೆಗೊಂಡಿದ್ದು 1.39 ಲಕ್ಷ ಸ್ನಾತಕ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ವಿಧ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ನಾಲ್ಕು ವಿಷಯಗಳಲ್ಲಿ ಪಿ.ಜಿ.ಡಿಪ್ಲೊಮಾ ಕೋರ್ಸುಗಳು ಹಾಗೂ 325ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳ ಕುರಿತು ಪಿ.ಎಚ್.ಡಿ. ಸಂಶೋಧನೆಗಳು ಜರುಗುತ್ತಿವೆ’ ಎಂದರು.
ವಿ.ವಿ ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿ ಎಂ.ಎ. ಸಪ್ನ, ಪ್ರೊ.ಕಮಲಾಕ್ಷಿ ತಡಸದ ಹಾಗೂ ಪ್ರೊ.ಅಶೋಕ ಡಿಸೋಜಾ ಇದ್ದರು.
38,485 ವಿದ್ಯಾರ್ಥಿಗಳಿಗೆ ಪದವಿ
ವಿಶ್ವವಿದ್ಯಾಲಯದ ಒಟ್ಟು 38,485 ವಿದ್ಯಾರ್ಥಿಗಳು (36642 ಸ್ನಾತಕ ಹಾಗೂ 1843 ಸ್ನಾತಕೋತ್ತರ) ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. 125 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 39 ಸುವರ್ಣ ಪದಕಗಳನ್ನು 4 ವಿಷಯವಾರು ಅಗ್ರ ಶ್ರೇಯಾಂಕಿತರು ಹಾಗೂ ಒಂದು ನಗದು ಬಹುಮಾನವನ್ನು (ಇಬ್ಬರು ವಿದ್ಯಾರ್ಥಿಗಳಿಗೆ) 28 ಪಿ.ಎಚ್.ಡಿ ಪದವಿಗಳನ್ನು ಪ್ರದಾನ ಮಾಡಲಾಗುವುದು.
ಸ್ವರ್ಣ ಪದಕ ವಿಜೇತರು
ರೂಪಾ ನಾಯಕ ಅಂಬಿಕಾ ಮಳೆದ ನಿಕಿತಾ ಪಸಾರೆ ರಿಯಾ ಕುಲಕರ್ಣಿ ನಂದೀಶ ಬಳೂತಿ ಪಲ್ಲವಿ ನಿಕ್ಕಮ ರಾಹುಲ ಸುರಾಗಾಂವಿ ವೀರೇಶ ಚಿನ್ನಾಪೂರ ಅಂಜಲಿ ಮಂದಿ ಪೂಜಾ ಕಾಂಬಳೆ ಮಲ್ಲಕಾರ್ಜುನ ಪೂಜಾರಿ ವಿನಾಯಕ ಘುಳಪ್ಪನ್ನವರ ರೇಷ್ಮಾ ಕಾಂಬಳೆ ಜ್ಯೋತಿ ದಸ್ತಿಕೊಪ್ಪ ತುಶಾರ ಮಜಲಟ್ಟಿ ಮಂಜುನಾಥ ನಿಲುಗಲ್ಲ ಕವಿತಾ ಹೊಸಮನಿ ರೂಪಾ ಕಾರಜೊಳ ಸಂಧ್ಯಾ ಕೋಲ್ಕರ್ ಚೈತ್ರಾ ಪಟ್ಟಣಶೆಟ್ಟಿ ಯಶೋದಾ ಕಂಬಾರ ಸಹನಾ ತರಗರ ಶ್ರೇಣಿಕಾ ಪವಾರ ಕಿರಣ ಮಂಟೂರ ಮಿನಾಲ್ ಬಡಿಗೇರ ಶಾಂತವ್ವ ಸಂಗನ್ನವರ ಪೂಜಾ ಗಡವೆ ಸುಪ್ರಿಯಾ ಕಾಂಬಳೆ ಅಮೃತಾ ಕಾಂಬಳೆ ವಸಂತ ಮೇಲಿನಮನಿ ತನುಜಾ ಬಿ ಅನುಶ್ರೀ ಗಾಯತ್ರಿ ಕುಲಕರ್ಣಿ ಅಪರ್ಣಾ ಪಾಟೀಲ ಅನುರಾಧ ಮಹಾನ ಮುಷಾಬಹರೀನ ಕಡಲಗಿ ಶೋಭಾ ಗಿರಿಮಲ್ಲನವರ ವಾಣಿಶ್ರೀ ಮುಂಜೆ ಪ್ರತೀಕ್ಷಾ ನೂಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.