ಬೆಳಗಾವಿ: ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಸರ್ಕಾರಿ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳ ಮೇಲ್ವಿಚಾರಕರು ಹಾಗೂ ಗ್ರಂಥಪಾಲಕರ ಸಂಘದ ಜಿಲ್ಲಾ ಘಟಕದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಕಾರ್ಯದರ್ಶಿ ಮಾರುತಿ ಮಲ್ಲವ್ವಗೋಳ ಮಾತನಾಡಿ, ‘2016ರಲ್ಲಿ ರಾಜ್ಯ ಸರ್ಕಾರ ₹ 13,200 ಕನಿಷ್ಠ ವೇತನ ನಿಗದಿಪಡಿಸಿ ರಾಜ್ಯಪತ್ರ ಹೊರಡಿಸಿತ್ತು. ಆದರೆ, ನಂತರ ವಿಶೇಷ ಗೆಜೆಟ್ ಮೂಲಕ ಅದನ್ನು ರದ್ದುಪಡಿಸಲಾಯಿತು. ‘8 ಗಂಟೆ ಇದ್ದ ಕೆಲಸದ ಅವಧಿಯನ್ನು 4 ಗಂಟೆ ಎಂದು ನಿಗದಿಮಾಡಿ, ನೀವು ಕೇವಲ 4 ಗಂಟೆ ಕೆಲಸ ಮಾಡುತ್ತೀರಿ. ಹೀಗಾಗಿ ಕನಿಷ್ಠ ವೇತನ ನೀಡಲು ಬರುವುದಿಲ್ಲ’ ಎಂದು ಸರ್ಕಾರ ಇದಕ್ಕೆ ಕಾರಣ ನೀಡಿತು. ಈ ಕ್ರಮವನ್ನು ಪ್ರಶ್ನಿಸಿ ಅನೇಕ ದಿನಗಳಿಂದ ಹೋರಾಟ ಮಾಡುತ್ತಿದ್ದರೂ, ಸರ್ಕಾರ ಗಮನಹರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನೌಕಕರು ಸೇವೆಯಲ್ಲಿದ್ದಾಗಲೇ ಮರಣ ಹೊಂದಿದರೇ, ಅನುಕಂಪದ ಆಧಾರದ ಮೇಲೆ ನೌಕರಿಯನ್ನು ಪತ್ನಿ ಅಥವಾ ಮಕ್ಕಳಿಗೆ ವಹಿಸುವುದನ್ನು ರದ್ದುಪಡಿಸಲಾಗಿದೆ. ಬೇರೆ ಇಲಾಖೆಯಲ್ಲಿ ಈ ನಿಯಮವಿದೆ. ಆದರೆ, ನಮಗೇಕಿಲ್ಲ. ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.
ಪರಿಹಾರ ಕೊಡಿ:‘ಸರ್ಕಾರದ ಈ ಕ್ರಮಗಳಿಂದ ಮನನೊಂದು ಹಾಗೂ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆಯನ್ನೂ ಮಾಡಲು ಸಾಧ್ಯವಾಗದೇ ಗ್ರಂಥಾಲಯ ಮೇಲ್ವಿಚಾರಕರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇತ್ತೀಚೆಗೆ ವಿಧಾನಸೌಧದಲ್ಲಿ ಮೇಲ್ವಿಚಾರಕ ರೇವಣ್ಣಕುಮಾರ ಎಂಬಾತ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿರುವುದೇ ಇದಕ್ಕೆ ನಿದರ್ಶನ. ರೇವಣ್ಣಕುಮಾರಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಗ್ರಂಥಾಲಯಗಳ ನಿರ್ವಹಣೆಯನ್ನು ಶಿಕ್ಷಣ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ ವಹಿಸಲಾಗಿದೆ. ನಿರ್ವಹಣೆಯನ್ನು ಮತ್ತೆ ಶಿಕ್ಷಣ ಇಲಾಖೆಗೆ ವಹಿಸಬೇಕು. ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿಬೇಕು. ಇಲ್ಲದಿದ್ದರೇ ತೀವ್ರ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸದಸ್ಯರಾದ ವೀರೇಶ ಕರಿಕಟ್ಟಿ,ಶಂಕರ ಭದ್ರಶೆಟ್ಟಿ, ಬಸವರಾಜ ಬೆಟಗೇರಿ, ಚನ್ನಪ್ಪ ಕಳಸಣ್ಣವರ, ಮಂಜುನಾಥ ಹಡಪದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.