ADVERTISEMENT

ಕಸಾಪ ಅಧ್ಯಕ್ಷ ಸ್ಥಾನ: ಮಹಿಳೆಗೆ ಅವಕಾಶ ಕೊಡಿ- ಡಾ.ಸರಸ್ವತಿ ಚಿಮ್ಮಲಗಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 13:02 IST
Last Updated 3 ನವೆಂಬರ್ 2021, 13:02 IST
ಡಾ.ಸರಸ್ವತಿ ಚಿಮ್ಮಲಗಿ
ಡಾ.ಸರಸ್ವತಿ ಚಿಮ್ಮಲಗಿ   

ಬೆಳಗಾವಿ: ‘ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಇತಿಹಾಸದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿಯೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಸದಸ್ಯರು ನನ್ನನ್ನು ಬೆಂಬಲಿಸಿ ದಾಖಲೆಗೆ ಅವಕಾಶ ಕೊಡಬೇಕು’ ಎಂದು ಅಧ್ಯಕ್ಷ ಸ್ಥಾನದ ಸ್ಪರ್ಧಿ ಡಾ.ಸರಸ್ವತಿ ಚಿಮ್ಮಲಗಿ ಕೋರಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕದ ಮಹಿಳೆಯರು ಸಾಧನೆ ಮಾಡಿದ್ದಾರೆ. ಆದರೆ, ಶತಮಾನ ಪೂರೈಸಿದ ಕಸಾಪ ಅಧ್ಯಕ್ಷೆಯನ್ನೇ ಕಂಡಿಲ್ಲ. ಈ ಕೊರತೆ ನೀಗಿಸಲು ಮತದಾರರು ಮನಸ್ಸು ಮಾಡಬೇಕು’ ಎಂದು ಮನವಿ ಮಾಡಿದರು.

‘ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ನಾನಾಗಿದ್ದೇನೆ. ರಾಜ್ಯದಲ್ಲಿ ಸಾಕಷ್ಟು ಮಹಿಳಾ ಸಾಹಿತಿಗಳು ಇದ್ದರೂ ಒಮ್ಮೆಯೂ ಅವಕಾಶ ಸಿಕ್ಕಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿದೆ. ಪರಿಷತ್ತಿನ ಎಲ್ಲ ಮಹಿಳಾ ಸದಸ್ಯರು ಹಾಗೂ ಮಹಿಳೆಯನ್ನು ಗೌರವಿಸುವ ಮತ್ತು ಅವರ ಶ್ರೇಯಸ್ಸು ಬಯಸುವ ಎಲ್ಲ ಪುರುಷ ಸದಸ್ಯರೂ ನನ್ನನ್ನು ಬೆಂಬಲಿಸಬೇಕು’ ಎಂದರು.

ADVERTISEMENT

‘ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಕೃಷಿ ಮಾಡಿದ್ದೇನೆ. 30 ಕೃತಿಗಳನ್ನು ಬರೆದಿದ್ದೇನೆ. ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. 100 ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಅಭಿನಯಿಸಿ ಕಲಾ ಸೇವೆಯಲ್ಲೂ ತೊಡಗಿದ್ದೇನೆ. ಶೋಷಿತರ ಪರ ಹೋರಾಡಿದ್ದೇನೆ. ನೆಲ–ಜಲದ ವಿಷಯದಲ್ಲಿ ಧಕ್ಕೆಯಾದಾಗ ಹೋರಾಟದ ಮುಂಚೂಣಿಯಲ್ಲಿದ್ದೇನೆ. ಮುಂದೆಯೂ ಇದನ್ನು ಮುಂದುವರಿಸುತ್ತೇನೆ. ಪರಿಷತ್ತಿಗೆ ಹೊಸ ನೋಟ ನೀಡಲು ಉದ್ದೇಶಿಸಿದ್ದೇನೆ. ರಾಜ್ಯದಾದ್ಯಂತ ನನಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ತಿಳಿಸಿದರು.

‘ಗೆದ್ದರೆ, ಕಸಾಪದ ಗೌರವ ಕಾರ್ಯದರ್ಶಿಯ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ಮೀಸಲಿಡುವೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಒದಗಿಸುವೆ. ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವೆ. ಪರಿಷತ್ತಿನ ಉಪವಿಧಿಗಳಲ್ಲಿ ಮಹತ್ವದ ತಿದ್ದುಪಡಿ ಮಾಡುವೆ’ ಎಂದು ಭರವಸೆ ನೀಡಿದರು.

ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮಳಲಗಿ, ಸಾಹಿತಿ ಜ್ಯೋತಿ ಬದಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.