ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಳಗಾವಿ: ‘ರಾಜ್ಯ ಸರ್ಕಾರ ನೀಡಿದ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ಅನ್ಯಾಯವಾಗಿದೆ. ಹೀಗಾಗಿ ನಮಗೆ ಪ್ರತ್ಯೇಕ ಮೀಸಲಾತಿ ಘೋಷಿಸಬೇಕು’ ಎಂದು ಭೂಮಿ ವಡ್ಡರ ಸೋಷಿಯಲ್ ವೆಲ್ಫೇರ್ ಸೊಸೈಟಿ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಜಿ. ಗಾಡಿವಡ್ಡರ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೋವಿ ವಡ್ಡರ ಸಮಾಜದಲ್ಲಿ ಒಟ್ಟು 101 ಹಿಂದುಳಿದ ಜಾತಿಗಳಿದ್ದು, ಆಯಾ ಜಾತಿಗಳ ಜನಸಂಖ್ಯೆಯು ಹೆಚ್ಚಾಗಿದೆ. ಹೀಗಾಗಿ ಸರ್ಕಾರ ನೀಡಿರುವ ಒಳ ಮೀಸಲಾತಿ ಆದೇಶ ಸರಿ ಇಲ್ಲ. ಅದನ್ನು ಪುನರ್ ಪರಿಶೀಲಿಸಬೇಕು. ಇಲ್ಲವೇ ರದ್ದುಪಡಿಸಬೇಕು’ ಎಂದರು.
‘ಹಿಂದೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನೀಡಿದ ಮೀಸಲಾತಿಯೆ ಉತ್ತಮವಾಗಿತ್ತು. ಆದರೆ, ಈ ಬಾರಿ ನೀಡಿರುವ ಒಳ ಮೀಸಲಾತಿಯಲ್ಲಿ ಭೋವಿ ವಡ್ಡರ ಸಮಾಜಕ್ಕೆ ತಾರತಮ್ಯ ಮಾಡಲಾಗಿದೆ. ಆದ್ದರಿಂದ ಒಳ ಮೀಸಲಾತಿ ಆದೇಶ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಎಲ್ಲ ಭೋವಿ ವಡ್ಡರ ಸಮುದಾಯದ ಜನರು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಮೋಹನ ಗಾಡಿ ವಡ್ಡರ, ಪವನ ಮಾಲಿಂಗಪುರ, ಕೆ.ಎಸ್. ಮಮದಾಪುರ, ಭರ್ಮು ಗಾಡಿವಡ್ಡರ, ಶೆಟ್ಟೆಪ್ಪ ಗಾಡಿ ವಡ್ಡರ, ಅವಿನಾಶ ಗಾಡಿ ವಡ್ಡರ ಸೇರಿದಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.