ADVERTISEMENT

ಅರ್ಜಿದಾರರಿಗೆ ಕಾಲಮಿತಿಯೊಳಗೆ ಮಾಹಿತಿ ಒದಗಿಸಿ: ರಾಜ್ಯ ಮುಖ್ಯ ಮಾಹಿತಿ ಆಯುಕ್ತ

ತರಬೇತಿ ಕಾರ್ಯಕ್ರಮದ‌ಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ.ಎಂ.ಪ್ರಸಾದ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:55 IST
Last Updated 1 ಆಗಸ್ಟ್ 2025, 2:55 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು   

ಬೆಳಗಾವಿ: ‘ಭ್ರಷ್ಟಾಚಾರ ನಿವಾರಣೆಗಾಗಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ತರಲಾಗಿದೆ. ಇದರಡಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಾಲಮಿತಿಯೊಳಗೆ ಮಾಹಿತಿ ಒದಗಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿ ಕರ್ತವ್ಯವಾಗಿದೆ’ ಎಂದು ರಾಜ್ಯ ಮುಖ್ಯ ಮಾಹಿತಿ‌ ಆಯುಕ್ತ ಎ.ಎಂ.ಪ್ರಸಾದ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ‌ ಪ್ರಥಮ‌‌ ಮೇಲ್ಮನವಿ ಪ್ರಾಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮದ‌ಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಕಾಯ್ದೆಯಡಿ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ವೈಯಕ್ತಿಕ ಮಾಹಿತಿ ನೀಡಲು ಬರುವುದಿಲ್ಲ.‌ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಅರ್ಜಿಗಳಿದ್ದರೆ ಮಾಹಿತಿ ನೀಡಬೇಕು. ಯಾವುದೇ ಅಧಿಕಾರಿ ಸಮಂಜಸ ಕಾರಣವಿಲ್ಲದೆ ಮಾಹಿತಿ ನೀಡಿದರೆ ಅಥವಾ ದುರುದ್ದೇಶದಿಂದ ತಪ್ಪಾಗಿ ಮಾಹಿತಿ ಕೊಟ್ಟರೆ ದಂಡ ಪಾವತಿಸಬೇಕಾಗುತ್ತದೆ. ಜತೆಗೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ADVERTISEMENT

‘ಮಾಹಿತಿ‌ ಹಕ್ಕು ಕಾಯ್ದೆ ಜಾರಿಯಾಗಿ 20 ವರ್ಷಗಳಾಗಿದ್ದು, 2019ರಲ್ಲಿ ಬೆಳಗಾವಿಯಲ್ಲಿ ಪೀಠ ಆರಂಭವಾಗಿದೆ. ಬೆಳಗಾವಿ ವಿಭಾಗದ ಪೀಠದಲ್ಲಿ 12 ಸಾವಿರಕ್ಕೂ ಅಧಿಕ ಅರ್ಜಿಗಳಿವೆ. ಅದರಲ್ಲಿ ಬೆಳಗಾವಿ ಜಿಲ್ಲೆಯ 3 ಸಾವಿರಕ್ಕೂ ಅಧಿಕ ಅರ್ಜಿ ಬಾಕಿ ಉಳಿದಿವೆ. ಅವುಗಳ ವಿಲೇವಾರಿಗೆ ಕ್ರಮ‌ ವಹಿಸುವ ಕುರಿತು ಸಂಬಂಧಿತರಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಯಾವುದೇ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ವಿವರ ಸುಲಭವಾಗಿ  ಸಾರ್ವಜನಿಕರಿಗೆ ಸಿಗಬೇಕು. ತಮ್ಮ‌ ಇಲಾಖೆಯ ಅಂತರ್ಜಾಲ ಪುಟದಲ್ಲಿ ಇದನ್ನು  ಪ್ರಚುರಪಡಿಸಬೇಕು. ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ 30 ದಿನಗಳ ಒಳಗೆ ಹಾಗೂ ಮೇಲ್ಮನವಿ ಪ್ರಾಧಿಕಾರಿ 45 ದಿನಗಳ ಒಳಗೆ ಮಾಹಿತಿ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್‌ ಮತ್ತಿತರ ಪ್ರಮುಖ‌ ಇಲಾಖೆಗಳ‌ ಮಾಹಿತಿ ಕಾಲಮಿತಿಯೊಳಗೆ ಒದಗಿಸಬೇಕು. ಮಾಹಿತಿಗೆ ಸಂಬಂಧಿಸಿದ ಕಡತಗಳು ಸಿಗದಿದ್ದರೆ ಅಥವಾ ಕಳವಾಗಿದ್ದರೆ ದೂರು ದಾಖಲಿಸಬೇಕು. ಪ್ರತಿ ತಿಂಗಳು ಅಭಿಯಾನದ ರೂಪದಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ‌ ವಹಿಸಬೇಕು. ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರಿಗೆ ಅನಾನುಕೂಲವಾಗಬಾರದು’ ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಿಕೊಳ್ಳಲು ಈ ಕಾರ್ಯಾಗಾರ ಉಪಯುಕ್ತವಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಬಾಕಿ‌ ಇರುವ ಅರ್ಜಿಗಳ  ವಿಲೇವಾರಿಗಾಗಿ ಮೂರು ತಿಂಗಳಿಗೊಮ್ಮೆ ಸಭೆ ಆಯೋಜಿಸಲಾಗುವುದು’ ಎಂದು ಹೇಳಿದರು.

ಬೆಳಗಾವಿ ಪೀಠದ ಮಾಹಿತಿ ಆಯುಕ್ತ ನಾರಾಯಣ ಚನ್ನಾಳ‌, ಜಿಲ್ಲಾ ಪೊಲೀಸ್‌  ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ‌ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಇತರರಿದ್ದರು.

ಎ.ಎಂ.ಪ್ರಸಾದ

Highlights - ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿ ಅಭಿಯಾನ ರೂಪದಲ್ಲಿ ಅರ್ಜಿ ವಿಲೇವಾರಿಗೊಳಿಸಿ ತಪ್ಪು ಮಾಹಿತಿ ನೀಡಿದ ಅಧಿಕಾರಿಗೆ ದಂಡ; ಎಚ್ಚರಿಕೆ

Quote - ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತಿಳಿದಿರಬೇಕು. ಇದರಿಂದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ಒದಗಿಸಲು ಅನುಕೂಲವಾಗುತ್ತದೆ ಎ.ಎಂ.ಪ್ರಸಾದ ರಾಜ್ಯ ಮುಖ್ಯ ಮಾಹಿತಿ‌ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.