ADVERTISEMENT

ಪ್ರಿಯಾಂಕ್‌ ಖರ್ಗೆ ಬಾಲಿಶ ಬುದ್ಧಿ: ಸಂಸದ ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:41 IST
Last Updated 16 ಅಕ್ಟೋಬರ್ 2025, 2:41 IST
ಬೆಳಗಾವಿ ರೈಲ್ವೆ ಮೂರನೇ ಗೇಟ್‌ ಬಳಿ ಹಾಳಾದ ರಸ್ತೆಯನ್ನು ಸಂಸದ ಜಗದೀಶ ಶೆಟ್ಟರ್‌ ಬುಧವಾರ ಪರಿಶೀಲಿಸಿದರು. ಉಪಮೇಯರ್ ವಾಣಿ ಜೋಶಿ ಹಾಗೂ ಅಧಿಕಾರಿಗಳು ಜತೆಯಾದರು
ಬೆಳಗಾವಿ ರೈಲ್ವೆ ಮೂರನೇ ಗೇಟ್‌ ಬಳಿ ಹಾಳಾದ ರಸ್ತೆಯನ್ನು ಸಂಸದ ಜಗದೀಶ ಶೆಟ್ಟರ್‌ ಬುಧವಾರ ಪರಿಶೀಲಿಸಿದರು. ಉಪಮೇಯರ್ ವಾಣಿ ಜೋಶಿ ಹಾಗೂ ಅಧಿಕಾರಿಗಳು ಜತೆಯಾದರು   

ಬೆಳಗಾವಿ: ‘ಆರ್‌ಎಸ್‌ಎಸ್‌ ದೇಶವನ್ನು ಕಟ್ಟುವ ಕೆಲಸ ಮಾಡುತ್ತ ಬಂದಿದೆ. ನೂರು ವರ್ಷಗಳ ಪೂರೈಸಿದ ಸಂದರ್ಭದಲ್ಲಿ ದೇಶದ ಯುವಪಡೆಯನ್ನು ಒಂದು ಮಾಡುವತ್ತ ಸಾಗಿದೆ. ಅದನ್ನು ಸಹಿಸದ ಕಾಂಗ್ರೆಸ್ಸಿಗರು ಹಗಲು– ರಾತ್ರಿ ಆರ್‌ಎಸ್‌ಎಸ್‌ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಚಿವ ಪ್ರಿಯಾಂಕ್‌ ಖರ್ಗೆ ಅವರ ಬಾಲಿಶ ಬುದ್ಧಿ ಹಾಗೂ ಅಹಂಕಾರದ ಮಾತಿನಿಂದಲೇ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಆದರೂ ಅವರಿಗೆ ಕನಿಷ್ಠ ಬುದ್ಧಿ ಬಂದಿಲ್ಲ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದರೆ ಮಾತ್ರ ಅವರಿಗೆ ಸಮಾಜದಲ್ಲಿ ಹೆಸರು ಉಳಿಯುತ್ತದೆ, ಸುದ್ದಿಯಲ್ಲಿ ಹೆಸರು ಬರುತ್ತದೆ ಎಂಬ ಭ್ರಮೆ ಇದೆ’ ಎಂದರು.

‘100 ವರ್ಷದಿಂದ ಕಷ್ಟ ಪಟ್ಟು ಕಟ್ಟಿರುವ ಫಲ ಈಗ ನೋಡುತ್ತಿದ್ದೇವೆ.  ಆರ್‌ಎಸ್‌ಎಸ್ ಗರಡಿಯಿಂದ ಪಳಗಿ ಬಂದಿದ್ದಕ್ಕೆ ನಾಯಕತ್ವ ಸಿಕ್ಕಿದೆ. ಪ್ರಿಯಾಂಕ್ ಖರ್ಗೆ ರಾಜಕೀಯವಾಗಿ ಬಿಜೆಪಿ ವಿರುದ್ದ ಹೋರಾಟ ಮಾಡಲಿ. ಆರ್‌ಎಸ್‌ಎಸ್ ವಿರುದ್ದ ಏಕೆ ಹೋರಾಟ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ’ ಎಂದರು.

ADVERTISEMENT

‘ನಮ್ಮಲ್ಲಿ ರಾಜಕೀಯಕ್ಕೆ ಬರುವ ಮುನ್ನ ತರಬೇತಿ ನೀಡಿ, ನಾಯಕತ್ವ ಗುಣ ಬೆಳೆಸುವುದು ಆರ್‌ಎಸ್‌ಎಸ್‌. ಆದರೆ, ಕಾಂಗ್ರೆಸ್ಸಿಗರಿಗೆ ಇಂಥ ಗುರುವೇ ಇಲ್ಲ. ಮಾರ್ಗದರ್ಶನವೇ ಇಲ್ಲದ ನಾಯಕರು ಅವರು. ಆರ್‌ಎಸ್‌ಎಸ್‌ ಬ್ಯಾನ್‌ ಮಾಡಬೇಕು ಎಂದು ಸಚಿವ ದಿನೇಶ ಗುಂಡೂರಾವ್‌ ಕೂಡ ಹೇಳಿಕೆ ನೀಡಿದ್ದಾರೆ. ಅವರಿಗೆ ಈ ಮಾತು ಹೇಳುವ ನೈತಿಕತೆಯೇ ಇಲ್ಲ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇಂದಿರಾ ಗಾಂಧಿ ಪ್ರಧಾನಿ ಆಗುವ ಆಸೆಗಾಗಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದರು. ಮೂರು ಬಾರಿ ನಿಷೇಧ ಆದರೂ ಈ ಸಂಸ್ಥೆ ನಿಲ್ಲಿಸಲು ಆಗಲಿಲ್ಲ. ಆಂಧ್ರಪ್ರದೇಶ ಸರ್ಕಾರ ಬ್ಯಾನ್ ಮಾಡಿದ್ದಕ್ಕೆ ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪ್ರಿಯಾಂಕ್ ಖರ್ಗೆ ಅವರು ಜನರ ಮತದಿಂದ ಗೆದ್ದು ಬಂದವರಲ್ಲ. ಅವರ ತಂದೆಯ ಹೆಸರಿನಿಂದ ಗೆದ್ದವರು. ಮೊದಲ ಬಾರಿಗೇ ಶಾಸಕರಾದವರು ಸಚಿವ ಸ್ಥಾನ ಹೊಂದಿದ್ದನ್ನು ಎಲ್ಲಿಯೂ ಯಾವ ಪಕ್ಷದಲ್ಲಿಯೂ ನೋಡಲು ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ
ಅವರು ಇಂಥದ್ದೆಲ್ಲ ಮಾಡುತ್ತಾರೆ’ ಎಂದು ಟೀಕಿಸಿದರು.

‘ಪ್ರಿಯಾಂಕ್‌ ಬಳಿ ಇರುವ ಅಹಂಕಾರ, ಕ್ರಿಮಿನಲ್ ಬುದ್ಧಿ ಆರ್‌ಎಸ್ಎಸ್ ಬಗ್ಗೆ ಟೀಕೆ ಮಾಡಿಸಲು ಹಚ್ಚಿದೆ. ಬಾಲಿಶ ಹೇಳಿಕೆ ಹಾಗೂ ಅಹಂಕಾರದಿಂದ ಅವರು ಹೊರಬರಬೇಕು. ದೇಶದ್ರೋಹಿ ಕೆಲಸ ಮಾಡುವ ಸಂಘಟನೆಗಳಿವೆ. ಅವುಗಳಿಗೆ ಕಾಂಗ್ರೆಸ್‌ ಬೆಂಬಲ ಕೊಡುವುದನ್ನು ಬಿಟ್ಟು ಬ್ಯಾನ್‌ ಮಾಡಬೇಕು. ಪ್ರಿಯಾಂಕ್‌ ಅದನ್ನು ಮಾಡಲಿ’ ಎಂದರು.

ಸೂಪರ್‌ ಫಾಸ್ಟ್‌ ರೈಲಿಗೆ ಮನವಿ

ಬೆಂಗಳೂರು–ಮುಂಬೈ ನಡುವೆ ಶೀಘ್ರದಲೇ ನೂತನ ಸೂಪರ್‌ ಫಾಸ್ಟ್‌ ರೈಲು ಸಂಚಾರ ಪ್ರಾರಂಭ ಮಾಡಲಿದೆ. ಇದನ್ನು ಬೆಳಗಾವಿ ನಗರದ ಮಾರ್ಗವಾಗಿ ಸಂಚರಿಸುವಂತೆ ನೋಡಿಕೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಜಗದೀಶ ಶೆಟ್ಟರ್ ಪತ್ರ ಬರೆದಿದ್ದಾರೆ.

ಬೆಳಗಾವಿ ನಗರವು ಬೆಂಗಳೂರು ನಂತರ ಎರಡನೆಯ ರಾಜಧಾನಿ ಎಂದು ಪರಿಗಣಿಸಲ್ಪಡುವ ಹಾಗೂ ಶೈಕ್ಷಣಿಕವಾಗಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯತ್ತ ಸಾಗುತ್ತಿರುವ ನಗರವಾಗಿದೆ. ಈ ಪ್ರಸ್ತಾಪಿತ ರೈಲು ಬೆಳಗಾವಿ ಮಾರ್ಗವಾಗಿ ಸಂಚರಿಸಿದಲ್ಲಿ ಬೆಳಗಾವಿ ನಗರದ ಸರ್ವಾಗೀಣ ಅಭಿವೃದ್ಧಿ ಹೊಂದುವುದರೊಂದಿಗೆ ನೆರೆ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಶೆಟ್ಟರ್‌ ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಮತ್ತು ಮುಂಬೈ ನಡುವೆ ಸುಮಾರು 1200 ಕಿ.ಮೀ ಅಂತರವಿದ್ದು ಅಂದಾಜು 650 ಕಿ.ಮೀ ಮಾರ್ಗ ಕರ್ನಾಟಕ ಬೆಳಗಾವಿ ಮಾರ್ಗವಾಗಿ ಅಂದರೆ ಶೇ 48 ವ್ಯಾಪ್ತಿಗೆ ಬರುವುದು. ಈ ನಿಟ್ಟಿನಲ್ಲಿ ಸೂಪರ್‌ ಫಾಸ್ಟ್ ರೈಲು ತುಮಕೂರು– ಹುಬ್ಬಳ್ಳಿ– ಧಾರವಾಡ– ಬೆಳಗಾವಿ–ಮಿರಜ್ ಮಾರ್ಗವಾಗಿ ಸಂಚಾರ ನಡೆಸುವಂತೆ ನೋಡಿಕೊಳ್ಳಬೇಕು. ಬಹು ಜಿಲ್ಲೆಗಳ ಪಾಲಿನ ಜನರಿಗೆ ಅನುಕೂಲಕರವಾಗಲಿದೆ ಎಂದೇ ಹೇಳಿದ್ದಾರೆ.

ರೈಲ್ವೆ ಮೇಲ್ಸೇತುವೆ ಪರಿಶೀಲನೆ

ಬೆಳಗಾವಿ ನಿವಾಸಿಗಳಿಂದ ಬಂದ ಅನೇಕ ದೂರುಗಳನ್ವಯ ಸಂಸದ ಜಗದೀಶ ಶೆಟ್ಟರ್ ಬುಧವಾರ  ನಗರದ ಟಿಳಕವಾಡಿ ಹತ್ತಿರವಿರುವ ರೇಲ್ವೆ ಗೇಟ್ ನಂ. 3ಕ್ಕೆ ಭೇಟಿ ನೀಡಿ ವಾಹನ ಸವಾರರಿಗೆ ಆಗುತ್ತಿರುವ ತೊಂದರೆ ಪರಿಶೀಲನೆ ನಡೆಸಿದರು. ‘ಒಂದು ವಾರದ ಅವಧಿಯಲ್ಲಿ ರಸ್ತೆ ದುರಸ್ತಿಗೊಳಿಸುವ ಕ್ರಮ ಕೈಗೊಳ್ಳಬೇಕು’ ಎಂದು ಲೋಕೋಪಯೋಗಿ ಇಲಾಖೆಯ ಬೆಳಗಾವಿ ಉಪ - ವಿಭಾಗದ ಸಹಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೋಳೆಕರಗೆ ಸೂಚನೆ ನೀಡಿದರು. ಉಪ ಮೇಯರ್‌ ವಾಣಿ ವಿಲಾಸ ಜೋಶಿ ಹಾಗೂ ರೈಲ್ವೆ ನೈರುತ್ಯ ವಲಯದ ಸಹಾಯಕ ಎಂಜಿನಿಯರ್‌ ಮಯನಾಕ ಹಾಜರಿದ್ದು ಮೇಲ್ಸೇತುವೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.