ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಗಾಂಧೀವಾದಿ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಅವರಿಗೆ ಮಗ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ. ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು. ಜಿಲ್ಲಾಡಳಿತದ ಪರವಾಗಿ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಮತ್ತು ತಹಶೀಲ್ದಾರ್ ಶೈಲೇಂದ್ರ ಅಂತಿಮ ನಮನ ಸಲ್ಲಿಸಿದರು.
ಎರಡು ಬಾರಿ ಶಾಸಕ: ಅವರು, ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1946 (ಬ್ರಿಟಿಷ್ ಸರ್ಕಾರವು ಆಗ ಸಾರ್ವತ್ರಿಕ ಚುನಾವಣೆ ನಡೆಸಿತ್ತು. ಆಗ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು) ಹಾಗೂ 1952 (ಹಿರೇಬಾಗೇವಾಡಿ ಕ್ಷೇತ್ರದಿಂದ)ರಲ್ಲಿ ಎರಡು ಬಾರಿ ಶಾಸಕರಾ
ಗಿದ್ದರು. ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲ ಎಂದು 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ಬಡವರಿಗೆ ನೂರು ಎಕರೆ ಜಮೀನು ದಾನ ನೀಡಿದ್ದರು. ತರುಣ ಕ್ರಾಂತಿ ಶಿಬಿರ ನಡೆಸಿ, ಯುವಜನರಿಗೆ ಗಾಂಧಿ ತತ್ವದ ಬಗ್ಗೆ ತಿಳಿಸುತ್ತಿದ್ದರು. ಸಾವಯವ ಕೃಷಿ ಮಾಡುತ್ತಿದ್ದರು. ಅದನ್ನು ಪಾಲಿಸುವಂತೆ ಜಾಗೃತಿ ಮೂಡಿಸುತ್ತಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾಗುವ ಖಾದಿ ಬಟ್ಟೆಗಳನ್ನು ಚರಕದಲ್ಲಿ ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ವಯೋಸಹಜ ಕಾರಣದಿಂದಾಗಿ ಇತ್ತೀಚೆಗೆ ಕೃಷಿ, ಬಟ್ಟೆ ನೇಯ್ಕೆ ಕೈಬಿಟ್ಟಿದ್ದರು.
‘ಗಾಂಧಿ ತತ್ವ ಪಾಲನೆಯು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ’ ಎಂದು ಪ್ರತಿಪಾದಿಸುತ್ತಿದ್ದ ಅವರು, ಅದನ್ನು ತಿಳಿಸಲು ಕಡೋಲಿ ಸಮೀಪದ ದೇವಗಿರಿಯಲ್ಲಿ ಕಟ್ಟಡ ನಿರ್ಮಿಸಿ ಗಾಂಧಿ ಘರ್’ ಎಂದು
ಹೆಸರಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.