
ಬೆಳಗಾವಿ ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಪ್ಪು ವರ್ಣದ ಪ್ರತಿಮೆ
ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಈಚೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಎಸೆದಿದ್ದಾರೆ ಎಂಬ ಸಂಗತಿ ಈಗ ತಿರುವು ಪಡೆದಿದೆ. ನೈಜವಾಗಿ ಅಲ್ಲಿ ಯಾರೂ ಮಸಿ ಬಳಿದು ಅವಮಾನ ಮಾಡಿಲ್ಲ. ಬದಲಾಗಿ, ಮರದಿಂದ ಸುರಿದ ದ್ರಾವಣವು ಪ್ರತಿಮೆ ಮೇಲೆ ಬಿದ್ದಿದೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಸ್ಪಷ್ಟಪಡಿಸಿದ್ದಾರೆ.
ಗುರುವಾರ ರಾತ್ರಿ ಪ್ರತಿಮೆ ಮೇಲೆ ದ್ರವರೂಪದ ವಸ್ತು ಬಿದ್ದಿತ್ತು. ಅದನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದು ಯಾವುದೇ ರೀತಿಯ ಮಸಿ ಅಥವಾ ಬಣ್ಣವಲ್ಲ. ಮರದಿಂದ ಸುರಿದ ದ್ರವ ಪದಾರ್ಥ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ.
ಅಲ್ಲದೇ, ಪ್ರತಿಮೆಯಿಂದ 10 ಮೀಟರ್ ಅಂತರದಲ್ಲೇ ಸಿಸಿಟಿವಿ ಕ್ಯಾಮೆರಾ ಇದೆ. ಅದನ್ನು ಪರಿಶೀಲಿಸಲಾಗಿದೆ. ಇಡೀ ರಾತ್ರಿ ಯಾರೂ ಪ್ರತಿಮೆಯ ಹತ್ತಿರ ಸುಳಿದಿಲ್ಲ ಮತ್ತು ಏನನ್ನೂ ಎಸೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಜನ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.